ಬೆಂಗಳೂರು: ಜಿಲ್ಲಾ ಮತ್ತು ರಾಜ್ಯಮಟ್ಟದ ನ್ಯಾಯಾಲಯಗಳಲ್ಲಿ ಸುಮಾರು ಐದು ಕೋಟಿಗೂ ಅಧಿಕ ವ್ಯಾಜ್ಯಗಳು ಇತ್ಯರ್ಥವಾಗದೆ ಹಾಗೇ ಉಳಿದಿದ್ದು, ಇವುಗಳನ್ನು ಪರಿಹರಿಸಲು ಇರುವ ಏಕೈಕ ಮಾರ್ಗವೆಂದರೆ ಮಧ್ಯಸ್ಥಿಕೆ ಕೋರ್ಟ್ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟರು.
ಬೆಂಗಳೂರು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ, ಸಂಧಾನ ಮತ್ತು ಸಮಾಲೋಚನಾ ಕೇಂದ್ರದಲ್ಲಿ ಕಳೆದ ಐದು ದಿನಗಳಿಂದ ನಡೆದ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಹಳ್ಳಿ, ರಾಜ್ಯ, ರಾಷ್ಟ್ರ ಹಾಗೂ ವ್ಯಕ್ತಿ-ವ್ಯಕ್ತಿಗಳ ನಡುವೆ ಹೆಚ್ಚು ಹೆಚ್ಚು ವ್ಯಾಜ್ಯಗಳು ಇತ್ಯರ್ಥವಾಗದೆ ಹಾಗೆ ಉಳಿದಿವೆ. ಇವುಗಳ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ಪ್ರತಿ ಸೋಮವಾರ ಮತ್ತು ಶುಕ್ರವಾರ ಮಧ್ಯಸ್ಥಿಕೆ ಅವಕಾಶ ಕಲ್ಪಿಸಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಮಾಡುತ್ತಿದೆ ಎಂದರು.
ಭಾರತಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದ್ದು ನ್ಯಾಯದ ಪರಿಕಲ್ಪನೆ ಧರ್ಮದಿಂದ ಮೂಡಿಬಂದಿದೆ. ಭಾರತೀಯರು ಆಧ್ಯಾತ್ಮ, ಮಹಾಭಾರತವನ್ನು ಹೆಚ್ಚು ನಂಬುತ್ತಾರೆ. ಪಾಂಡವರು ನ್ಯಾಯಕ್ಕಾಗಿ ಪರಿತಪಿಸುತ್ತಿರುವಾಗ ವಿರೋಧಿ ಪಾಳಯದಲ್ಲೇ ಇದ್ದುಕೊಂಡು ನ್ಯಾಯದ ಪರ ದುಡಿದ ಶಕುನಿಯಂತಹ ಪಾತ್ರವೂ ಒಂದು ರೀತಿಯಲ್ಲಿ ಇಷ್ಟವಾಗುತ್ತದೆ.ಪ್ರತಿಯೊಬ್ಬನ ಜೀವನ ಮಾನವೀಯ ನೆಲಗಟ್ಟಿನಲ್ಲಿ ಬೆಳೆದುಬಂದರೆ ಕಾನೂನಿನ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ವ್ಯವಸ್ಥೆ ಬದಲಾಗಲು ಜನರ ಮನೋಧೋರಣೆ ಬದಲಾಗಬೇಕು. ಮನೋಧೋರಣೆ ಬದಲಾಗಲು ಬಡತನ ನಿವಾರಣೆಯಾಗಬೇಕು. ಪ್ರತಿಯೊಬ್ಬರು ಯಾವುದೇ ಮೂಲಭೂತ ಸೌಕರ್ಯ ಕೊರತೆ ಇಲ್ಲದೆ ಜೀವನ ನಡೆಸಿದರೆ ವಿಶ್ವಶಾಂತಿ ಲಭಿಸಿದಂತಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಇಂದು ಎಲ್ಲ ಕಡೆ ಒತ್ತಡದ ಜೀವನವನ್ನು ನೋಡುತ್ತಿದ್ದೇವೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಒತ್ತಡ ಎನ್ನುವ ಕಾಲ ಹೋಗಿ ಪ್ರಾಧ್ಯಾಪಕರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಐದು ದಿನದ ಶಿಬಿರದಲ್ಲಿ ಪ್ರಾಧ್ಯಾಪಕರು, ಲೆಕ್ಕ ಸನ್ನದುದಾರರು, ವಕೀಲರು ಭಾಗವಹಿಸಿ ತರಬೇತಿ ಪಡೆದಿರುವುದು ಒಳ್ಳೆಯ ಬೆಳವಣಿಗೆ. ಪ್ರತಿಯೊಬ್ಬರು ಜೀವನ ಶೈಲಿಯಲ್ಲಿ ಸರಳತೆ ಪಾಲಿಸಿ, ಜೀವನ ಕೌಶಲ ಬೆಳೆಸಿಕೊಂಡರೆ ಒತ್ತಡದ ಬದುಕನ್ನು ನಿಭಾಯಿಸಬಹುದು ಎಂದು ಸಲಹೆ ನೀಡಿದರು.
ನಿಮ್ಹಾನ್ಸ್ ನ ಮನೋರೋಗ ಪ್ರಾಧ್ಯಾಪಕಿ ಡಾ.ಪ್ರತಿಮಾ ಮೂರ್ತಿ ಮಾತನಾಡಿ, ಒತ್ತಡಮುಕ್ತ ಜೀವನ ನಿರ್ವಹಣೆಗೆ ಉತ್ತಮ ಕೌಶಲ, ಸರಳ ಜೀವನ, ಮಾನಸಿಕ ಆರೋಗ್ಯದ ಸುಸ್ಥಿರತೆ ಮತ್ತು ಅವಧಿಯ ತಾಳ್ಮೆ ಅತಿ ಮುಖ್ಯ.ಪ್ರತಿಯೊಬ್ಬರಲ್ಲಿಯೂ ಸಾಮರ್ಥ್ಯವಿದ್ದು ಪರಸ್ಪರ ಗೌರವದಿಂದ ಕಂಡಾಗ ಮಾತ್ರ ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
Advertisement