ಬೆಂಗಳೂರು: ಕಳೆದ ವಾರಾಂತ್ಯದಲ್ಲಿ ಸ್ನೇಹಿತರ ಜತೆ ನಂದಿಬೆಟ್ಟಕ್ಕೆ ಕಾರಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಕಿರಣ್ಕುಮಾರ್ ಕೊನೆಗೂ ಜೀವನ್ಮರಣದ ಹೋರಾಟದಲ್ಲಿ ಸೋತರೂ ಇನ್ನೊಬ್ಬರ ಬದುಕಿನಲ್ಲಿ ಬೆಳಕಾಗಿದ್ದಾನೆ.
ಕೆ.ಆರ್.ಪುರಂನ ಸಿಲಿಕಾನ್ ಸಿಟಿ ಕಾಲೇಜು ವಿದ್ಯಾರ್ಥಿ ಕಿರಣ್ ಕುಮಾರ್ ಹೃದಯವನ್ನು ಕಿರಣ್ ಕುಮಾರ್ ತಂದೆ ಪ್ರಭುಕುಮಾರ್ ಸಂಕಷ್ಟದಲ್ಲಿದ್ದ ವ್ಯಕ್ತಿಯೊಬ್ಬರಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಹೃದಯವನ್ನು ಸಕಾಲದಲ್ಲಿ ನಾರಾಯಣ ಹೃದಯಾಲಯಕ್ಕೆ ತಲುಪಿಸುವ ಮೂಲಕ ಬೆಂಗಳೂರು ಸಂಚಾರ ಪೊಲೀಸರು ಕರ್ತವ್ಯ ಪ್ರಜ್ಞೆ `ಮಿಡಿದಿದ್ದು', ವೈದ್ಯರು ಈ ಹೃದಯವನ್ನು ಮತ್ತೊಂದು ದೇಹಕ್ಕೆ ಜೋಡಿಸಿ, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ.ಭಾನುವಾರ ಬೆಳಗಿನ ಜಾವ ಇಂಥದೊಂದು ಘಟನೆ ಸದ್ದಿಲ್ಲದೇ ನಡೆದಿದ್ದು, ಕಿರಣ್ಕುಮಾರ್ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾನೆ. ಇದಕ್ಕೆ ಕಾರಣ ಕಿರಣ್ ಅವರ ತಂದೆ ಪ್ರಭುಕುಮಾರ್.
ವರ್ಷದ ಹಿಂದಷ್ಟೆ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪತ್ನಿಯನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಎದೆ ಎತ್ತರಕ್ಕೆ ಬೆಳೆದ ಮಗನೂ ಕೈಬಿಟ್ಟು ಹೋಗುತ್ತಾನೆಂದು ಗೊತ್ತಾದಾಗ ಅದೆಷ್ಟು ದುಃಖವಾಗಬಹುದು? ಅದು ಊಹೆಗೆ ನಿಲುಕದ್ದು. ಆದರೆ ಆ ಸಂದರ್ಭದಲ್ಲೇ ಸ್ವಯಂಪ್ರೇರಣೆಯಿಂದ ಮಗನ ಅಂಗಾಂಗ ದಾನಕ್ಕೂ ಮುಂದಾಗಿ ಮಾನವೀಯತೆ ಮೆರೆದವರು ಪ್ರಭುಕುಮಾರ್.
ಕೆ.ಆರ್.ಪುರಂ ಸಿಲಿಕಾನ್ ಸಿಟಿ ಕಾಲೇಜಿನ ದ್ವಿತೀಯ ಪಿಯು ಕಲಿಯುತ್ತಿದ್ದ ಕಿರಣ್ ಕುಮಾರ್ 17) ಸ್ನೇಹಿತರೊಂದಿಗೆ ದಿಬೆಟ್ಟಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿತ್ತು. ಕಾರಿನಲ್ಲಿದ್ದ ಐವರು ಸ್ನೇಹಿತರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಸಣ್ಣ ಗಾಯವೂ ಇಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದ. ಕಿರಣ್ ಮಾತ್ರ ಗಂಭೀರ ಗಾಯಗೊಂಡು ಮಡಿವಾಳದ ವೆಂಕಟೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.
ಆಂಬ್ಯುಲೆನ್ಸ್ ಚಾಲಕ ದಯಾ ಸಾರಥ್ಯ
ಸಾಮಾನ್ಯವಾಗಿ ಹೃದಯವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬದಲಾಯಿಸಲು ಅವಕಾಶ ಕೇವಲ ಎರಡು ತಾಸು ಮಾತ್ರ. ಅದನ್ನು ವೈದ್ಯಕೀಯ ಭಾಷೆಯಲ್ಲಿ ಗೋಲ್ಡನ್ ಹವರ್ ಎನ್ನಲಾಗುತ್ತದೆ. ಪ್ರತೀ ಕ್ಷಣವೂ ಅತ್ಯಮೂಲ್ಯ. ಹೀಗಾಗಿ ಬೆಂಗಳೂರಿನ ಗುಂಡಿ ಗಳಲ್ಲಿ ಅತಿ ಶೀಘ್ರವಾಗಿ ಹೃದಯವಿರುವ ಪೆಟ್ಟಿಗೆಯನ್ನು ಗ್ಲೋಬಲ್ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ತಲುಪಿಸುವ ಸಾರಥ್ಯ ಹೊತ್ತಿದ್ದು ಆಂಬ್ಯುಲೆನ್ಸ್ ಚಾಲಕ ದಯಾ. 38 ಕಿಮೀ ದೂರದ ದಾರಿಯನ್ನು ಕೇವಲ 23 ನಿಮಿಷದಲ್ಲಿ ತಲುಪಿದ ಅವರು ಸೈ ಎನಿಸಿಕೊಂಡರು.
ಚಿಕಿತ್ಸೆಗೆ ಸ್ಪಂದಿಸಲಿಲ್ಲ: ಮೆದುಳಿನ ಸಂಪರ್ಕದ ನರಗಳು ಚಿಕಿತ್ಸೆಗೆ ಸ್ಪಂದಿಸದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕಿರಣ್ ನನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ ವೇಳೆ ಕಿರಣ ಚಿಕಿತ್ಸೆಗೆ ಪಂದಿಸುತ್ತಿಲ್ಲ ಎಂಬುದು ವೈದ್ಯರಿಗೆ ಖಚಿತವಾಗಿ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಈ ಕ್ಷಣದಲ್ಲಿ ದುಃಖಿತಗೊಂಡ ಕಿರಣ್ ತಂದೆ ಪ್ರಭುಕುಮಾರ್ ಹಾಗೂ ಸಹೋದರ ಅಭಿಷೇಕ್, ಸಾವರಿಸಿಕೊಂಡು ಕಿರಣನ ಅಂಗಾಂಗಗಳು ಇನ್ನೊಬ್ಬರ ಬಾಳನ್ನು ಬೆಳಗಬೇಕೆಂದು ನಿರ್ಧಾರಕ್ಕೆ ಬಂದರು. ಮಾಹಿತಿ ನಾರಾಯಣ ಹೃದಯಾಲಯಕ್ಕೆ ಮುಟ್ಟುತ್ತಿದ್ದಂತೆ ಕಳೆದ ಆರು ತಿಂಗಳಿಂದ ಹೃದಯ ಬೇನೆಯಿಂದ ಬಳಲಿ ಬದಲಿ ಹೃದಯಕ್ಕೆ ಕಾಯ್ದಿದ್ದ 35ರ ಹರೆಯದ ವ್ಯಕ್ತಿಗೆ ಈ ಹೃದಯ ಬದಲಿಸುವುದೆಂದು ವೈದ್ಯರು ತೀರ್ಮಾನಿಸಿದರು.
ಆದರೆ, ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ಬಿಜಿಎಸ್ ನ ವೈದ್ಯರಾದ ಜ್ಯೂಲಿಯವರು ವಿದೇಶಕ್ಕೆ ತೆರಳುತ್ತಿದ್ದರು. ನಂತರ ವಿಷಯ ತಿಳಿದು ವಾಪಸಾದರು. ನಂತರ ಅತ್ತ ಕಿರಣನ ಹೃದಯವನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸುವ ಪ್ರಕ್ರಿಯೆ ಆರಂಭವಾದರೆ, ಇತ್ತ ನಾರಾಯಣ ಹೃದಯಾಲಯ ತಂಡವು ಹೃದಯವನ್ನು ತೆಗೆದುಕೊಂಡು ಹೋಗಲು ಸಜ್ಜಾಯಿತು. ಮಧ್ಯಾಹ್ನ 12.45ಕ್ಕೆ ಬಿಜಿಎಸ್ನಲ್ಲಿ ಹೃದಯ ತಮ್ಮ ಕೈಸೇರುತ್ತಿದ್ದಂತೆ ನಾರಾಯಣ ಹೃದಯಾಲಯಕ್ಕೆ ಒಯ್ಯಲಾಯಿತು.
ಈ ಪ್ರಯತ್ನಕ್ಕೆ ಸಾಥ್ ನೀಡಿದ್ದು ಬೆಂಗಳೂರಿನ ಸಂಚಾರಿ ಪೊಲೀಸರು. ನಗರದ (ಸಂಚಾರ ಭಾಗ)ದ ಆಯುಕ್ತ ಸಲೀಂ ನೇತೃತ್ವದ ತಂಡ ಗ್ರೀನ್ ಟ್ರಾಫಿಕಿಂಗ್ ವ್ಯವಸ್ಥೆ ಮೂಲಕ ರಸ್ತೆಯಲ್ಲಿ ಆಂಬ್ಯುಲೆನ್ಸ್ ಸಂಚಾರಕ್ಕೆ ಮುಕ್ತವಾಗುವಂತೆ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಕಿರಣ್ ನ ಹೃದಯ ತಲುಪುತ್ತಿದ್ದಂತೆ ಶಸ್ತ್ರಚಿಕಿತ್ಸೆ ಆರಂಭಿಸಿ 35 ವಯಸ್ಸಿನ ವ್ಯಕ್ತಿಗೆ ಹೃದಯವನ್ನು ಬದಲಿಸಿ ಸುಖಾಂತ್ಯಗೊಳಿಸಿದರು. ಇನ್ನು ಕಿರಣ್ ಕುಮಾರ್ ಮೂತ್ರಪಿಂಡ ವನ್ನು ಬಿಜಿಎಸ್ ಸ್ಪತ್ರೆಯಲ್ಲಿ ದಾನ ಮಾಡಲಾಯಿತು.ಉಳಿದ ಅಂಗಾಂಗಗಳನ್ನು ದಾನ ಮಾಡಲು ವೈದ್ಯರು ಸಿದ್ಧತೆ ನಡೆಸಿದ್ದಾರೆ.
ಕಿರಣ್ ಪೋಷಕರು ಸ್ವಯಂಪ್ರೇರಿತರಾಗಿ ಹೃದಯ ದಾನ ಮಾಡಲು ಮುಂದಾದರು. ತಿಂಗಳಿಂದ ಹೃದಯ ಬಯಸುತ್ತಿದ್ದ ವ್ಯಕ್ತಿ ನಮ್ಮಆಸ್ಪತ್ರೆಯಲ್ಲಿದ್ದರು. ಹೃದಯ ತಂದುಕೊಡುವುದು ಸವಾಲಿನ ಕೆಲಸವೇ ಆಗಿತ್ತು. ಎಲ್ಲರ ಸಹಕಾರದಿಂದ ಅದು ಸಾಧ್ಯವಾಯಿತು.
● ಕೆ ವಿ ಕಾಮತ್ ಮಾರ್ಕೆಟಿಂಗ್ ಹೆಡ್, ನಾರಾಯಣ ಹೃದಯಾಲಯ
Advertisement