ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಜ.3ರಂದು ಚಿತ್ರ ಸಂತೆ ನಡೆಯುತ್ತಿದ್ದು, ಕಲಾಪ್ರೇಮಿಗಳು ಮತ್ತು ಕಲಾವಿದರ ನಡುವಿನ ಬಾಂಧವ್ಯ ವೃದ್ಧಿಗೆ ಚಿತ್ರಕಲಾ ಪರಿಷತ್ ಸಜ್ಜಾಗುತ್ತಿದೆ.
ಜನವರಿ 3ರಂದು ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್ ಹೋಟೆಲ್ವರೆಗೂ ಚಿತ್ರಸಂತೆ ಪ್ರದರ್ಶನವಿರುತ್ತದೆ ಎಂದು ಪರಿಷತ್ನ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮನೆಗೊಂದು ಕಲಾಕೃತಿ ಅಭಿಯಾನದಲ್ಲಿ ನಡೆಯುತ್ತಿರುವ ಚಿತ್ರಸಂತೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 1500ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕನಿಷ್ಠ 100 ರಿಂದ 10 ಲಕ್ಷ ಮೌಲ್ಯದ ಕಲಾಕೃತಿಗಳು ಮಾರಾಟವಾಗಲಿವೆ. ಚಿತ್ರಸಂತೆಯಲ್ಲಿ ಮಾರಾಟ ಮಾಡುವ ಯಾವುದೇ ಕಲಾಕೃತಿಗೆ ಚಿತ್ರಕಲಾ ಪರಿಷತ್ ಶುಲ್ಕ ಪಡೆಯುವುದಿಲ್ಲ. ಚಿತ್ರಸಂತೆಯಲ್ಲಿ ಭಾಗವಹಿಸುವ ಹೊರಗಿನ ಕಲಾವಿದರಿಗೆ ಉಚಿತ ವಸತಿ, ತಿಂಡಿ, ಊಟದ ವ್ಯವಸ್ಥೆಯನ್ನು ಪರಿಷತ್ ಕಲ್ಪಿಸಲಿದೆ. ವಯಸ್ಸಾದವರಿಗೆ ಮತ್ತು ವಿಕಲಚೇತನರಿಗೆ ಚಿತ್ರಸಂತೆ ವೀಕ್ಷಿಸಲು ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ. ಚಿತ್ರಸಂತೆಗೆ ಎಲ್ಲ ಕಡೆಯಿಂದ ಒಟ್ಟು ರಿಂದ 3 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪ್ರತಿವರ್ಷದಂತೆ ಈ ಬಾರಿಯೂ ಚಿತ್ರಸಂತೆ ನಡೆಯುವ ಕುಮಾರಕೃಪಾ ರಸ್ತೆಯ ಪ್ರಮುಖ ತಾಣಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸುವುದು, ಸೂಕ್ತ ಪೊಲೀಸ್ ಭದ್ರತೆ ಹಾಗೂ ಕಲಾವಿದರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಚಿತ್ರಸಂತೆ ನಡೆಸಲಾಗುವುದು ಎಂದರು.
ಜನವರಿ 3ರಂದು ನಡೆಯಲಿರುವ ಚಿತ್ರ ಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಚಿವ ರೋಷನ್ಬೇಗ್ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಸಚಿವರಾದ ಟಿ.ಬಿ. ಜಯಚಂದ್ರ, ಆರ್.ವಿ. ದೇಶಪಾಂಡೆ, ಕೆ.ಜೆ.ಜಾರ್ಜ್, ಮೇಯರ್ ಮಂಜುನಾಥರೆಡ್ಡಿ ಭಾಗವಹಿಸಲಿದ್ದಾರೆ. ಚಿತ್ರಕಲಾ ಪರಿಷತ್ನ ಪ್ರಧಾನ ಕಾರ್ಯದರ್ಶಿ ಡಿ.ಕೆ.ಚೌಟ, ಉಪಾಧ್ಯಕ್ಷ ರಾಮಕೃಷ್ಣಪ್ಪ ಮತ್ತಿತರರು ಇದ್ದರು.
Advertisement