ಬೆಂಗಳೂರು: ಪಾಶ್ಚಾತ್ಯರನ್ನು ತಡೆದುಕೊಳ್ಳಬಹುದು, ಪಾಶ್ಚಾತ್ಯ ಸಂಸ್ಕೃತಿ ಯಿಂದ ಪ್ರಭಾವಿತರಾದ ನಮ್ಮವರನ್ನು ತಡೆದುಕೊಳ್ಳುವು ದು ಕಷ್ಟವಾಗುತ್ತದೆ ಎಂದು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕಳೆದ ಐದು ದಿನಗಳಿಂದ ನಡೆದ `ಬನ್ನಂಜೆ 80ರ ಸಂಭ್ರಮ' ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋದ ನಮ್ಮವರೇ ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ, ಧರ್ಮ ಸಂಸ್ಕೃತಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಅಪ ಪ್ರಚಾರ ಮಾಡುತ್ತಿರುವವರಿಗೆ ಪ್ರವಚನ ಮೂಲಕ ಬನ್ನಂಜೆಯವರು ಸರಿಯಾದ ಉತ್ತರ ನೀಡುತ್ತಿದ್ದಾರೆ ಎಂದರು.
ಮಧ್ವಾಚಾರ್ಯರೊಬ್ಬರೇ ರಾಮಾಯಣದ ಬಗ್ಗೆ ಸರಿಯಾಗಿ ವಿಶ್ಲೇಷಣೆ ಮಾಡಿದ್ದಾರೆ ಎಂದು ಹೇಳಿದ ಅವರು, ಅಲ್ಲಿ ರಾಮನು ರಾವಣನ ದುರ್ಗುಣಗಳನ್ನಷ್ಟೇ ಸಾಯಿಸಲು ಹೊರಟಿದ್ದ, ಅದಕ್ಕಾಗಿ ರಾವಣನನ್ನು ಕೊಂದ. ಅಲ್ಲಿ ಯಾವುದೇ ಜಾತಿ ವಿಚಾರ ಕಂಡುಬರುವುದಿಲ್ಲ. ಬ್ರಾಹ್ಮಣನಾಗಿರ ಬೇಕೆಂದೇನಿಲ್ಲ, ಯಾರೇ ಆಗಿದ್ದರೂ ನಡತೆಯಲ್ಲಿ ಸರಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಬನ್ನಂಜೆಯವರು ಯಾವುದೇ ವಿಷಯದಲ್ಲಿ ಚಿಕ್ಕಂದಿ ನಿಂದಲೂ ಸ್ವತಂತ್ರರಾಗಿದ್ದಾರೆ, ಸ್ವತಂತ್ರ ನಿಲುವು ತೆಗೆದು ಕೊಳ್ಳುತ್ತಾರೆ. ಈ ವಿಚಾರಗಳನ್ನು ಲೇಖನ ಮತ್ತು ಪ್ರವಚನದ ಮೂಲಕ ನೀಡುತ್ತಿದ್ದಾರೆ. ದೊಡ್ಡ ವಿಚಾರಗಳನ್ನು ತಿಳಿದುಕೊಂಡಿರುವುದು ಅವರ ಶ್ರಮಕ್ಕೆ ದಕ್ಕಿದ ಫಲ ಎಂದರು. ಲೇಖಕ ಬೊಳವಾರು ಮಹ್ಮದ್ ಕುಂಞ ಮಾತನಾಡಿ, ಯಾವುದೇ ವಿಚಾರಗಳನ್ನು ಬೇರೊಬ್ಬರ ವ್ಯಕ್ತಿಗಳಿಂದ ಕೇಳುವುದಕ್ಕೂ ಬನ್ನಂಜೆಯವರಿಂದ ಕೇಳುವುದಕ್ಕೂ ವ್ಯತ್ಯಾಸವಿದೆ. ಮನುಷ್ಯ ಸಂಬಂಧವನ್ನು ಬನ್ನಂಜೆಯವರು ನನಗೆ ವೈಯಕ್ತಿಕವಾಗಿ ಕಲಿಸಿಕೊಟ್ಟಿದ್ದಾರೆ ಎಂದರು. ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರ ಜಿ ವೆಂಕಟೇಶ್ ಮಾತನಾಡಿ, ಬಾಣಭಟ್ಟ ಕೃತಿಗಳನ್ನು ಅನುವಾದ ಮಾಡಿದವರ ಪೈಕಿ ಭಾರತದಲ್ಲೇ ಬನ್ನಂಜೆಯವರು ಅಗ್ರಗಣ್ಯರು. ಕನ್ನಡದ ಕನ್ನಡಿಯಲ್ಲಿ ಎಲ್ಲವನ್ನೂ ಸಾಧ್ಯವಾಗಿಸಿಕೊಟ್ಟಿದ್ದಾರೆ. ವಾಗ್ಮಯ, ಸಂಗೀತ, ಅನುವಾದ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದು, ಕ್ರಿಯಾಶೀಲರಾಗಿದ್ದಾರೆ ಎಂದರು.
Advertisement