ಎತ್ತಿನಹೊಳೆ ಯೋಜನಾ ಸ್ಥಳಕ್ಕೆ ನಿಯೋಗ ಭೇಟಿ
ಮಂಗಳೂರು: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಕೆಲವು ಯೋಜನಾ ಪ್ರದೇಶಕ್ಕೆ ಕೇಂದ್ರದ ಪ್ರಾದೇಶಿಕ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಕಾರಿಗಳ ನಿಯೋಗ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು. ಈ ಮೂಲಕ ಪರಿಸಕ್ಕೆ ತೊಂದರೆಯಾಗದಂತೆ ಯೋಜನೆ ನಡೆಯುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದು, ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸುವುದಾಗಿ ತಂಡ ಹೇಳಿದೆ. ಆದರೆ, ಇದು ಕಣ್ಣೊರೆಸುವ ತಂತ್ರ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಜತೆ ಆಗಮಿಸಿದ ಕೇಂದ್ರದ ಪ್ರಾದೇಶಿಕ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಕಾರಿಗಳು ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಕ್ಷಿತಾರಣ್ಯಕ್ಕೆ ಭೇಟಿ ಇಲ್ಲ: ಉದ್ದೇಶಿತ ಎತ್ತಿನ ಹೊಳೆ ಯೋಜನೆಯ ಕೀರಿಹೊಳೆ, ಮಾರನಹಳ್ಳಿ, ಕಾಡುಮನೆ ಗೇಟ್ ಪ್ರದೇಶಗಳಿಗೆ ಮಾತ್ರ ಭೇಟಿ ನೀಡಿದ ನಿಯೋಗ ರಕ್ಷಿತಾರಣ್ಯ ಪ್ರದೇಶ ಇರುವ ಮೊಗೇನಹಳ್ಳಿ ಮತ್ತು ಹೊಂಗಡಹಳ್ಳ ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡಲಿಲ್ಲ. ಇದು ಸ್ಥಳಕ್ಕೆ ಬಂದಿದ್ದ ಪರಿಸರವಾದಿಗಳ ಅಸಮಾಧಾನಕ್ಕೆ
ಕಾರಣವಾಯಿತು. ಇದರಿಂದ ನ್ಯಾಯಯುತ ವರದಿ ಸಲ್ಲಿಕೆಯಾಗಲಿದೆಯೇ ಎಂದೂ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ತಹಸೀಲ್ದಾರ್ ಗೈರು: ನಿಯೋಗ ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಕಂದಾಯ ಇಲಾಖೆಯ ಯಾವುದೇ ಅಧಿಕಾರಿಗಳು ಹಾಜರಿರಲಿಲ್ಲ. ಅಲ್ಲಿ ತೆರಳಿದ್ದ ಪ್ರರ್ತಕರ್ತರು ಇದ್ದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ