ಹೊಸ ವರ್ಷದಂದು ಹಾಡಿಯಲ್ಲಿ ವಾಸ್ತವ್ಯ ಹೂಡಲಿರುವ ಸಚಿವ ಆಂಜನೇಯ

ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ಹೋಬಳಿಗಳಲ್ಲಿಯೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ..
ಎಚ್ .ಆಂಜನೇಯ
ಎಚ್ .ಆಂಜನೇಯ

ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ಹೋಬಳಿಗಳಲ್ಲಿಯೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪತ್ರಿಕಾ ಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು 15 ಕೋ.ರು. ವೆಚ್ಚದಲ್ಲಿ 10 ಎಕರೆ ಜಾಗದಲ್ಲಿ ಶಾಲೆ ನಿರ್ಮಿಸುವ ಯೋಜನೆಯೊಂದನ್ನು ಜೂನ್ ಒಳಗೆ ರೂಪಿಸಲಾಗುವುದು.

ಆರಂಭದಲ್ಲಿ ಖಾಸಗಿ ಕಟ್ಟಡ-ದಲ್ಲಿಯೇ ಶಾಲೆಗಳನ್ನು ತೆರೆದು  ನಂತರ ಹಂತ ಹಂತವಾಗಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು. ಇದಕ್ಕೆ ಸರ್ಕಾರದ ಬಳಿ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅದೇ ರೀತಿ ಮುಂದಿನ ವರ್ಷ 200 ವಿದ್ಯಾರ್ಥಿ ನಿಲಯಗಳಿಗೆ ಕಟ್ಟಡ ನಿರ್ಮಾಣ ಚಾಲನೆ ನೀಡಲಾಗುವುದು. ನೂರು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವುಳ್ಳ ವಿದ್ಯಾರ್ಥಿ ನಿಲಯಕ್ಕೆ 3.50 ಕೋ.ವೆಚ್ಚದಲ್ಲಿ ಕಟ್ಟಡ ನಿಮ್ರಿಸಲಾಗುವುದು.ಸದ್ಯ ಬಾಡಿಗೆ ಕಟ್ಟಡದಲ್ಲಿರುವ ಹಾಸ್ಟೆಲ್ ಗಳನ್ನು ಸ್ವಂತ ಕಟ್ಟಡಗಳಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಶೋಷಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಸರ್ಕಾರ ಬದ್ಧವಾಗಿದ್ದು ಅಗತ್ಯವಿರುವ ಎಲ್ಲಾ ಬಗೆಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದ ಸಚಿವ ಆಂಜನೇಯ ಅವರು ಎಸ್‍ಸಿಪಿ ಹಾಗೂ ಟಿಎಸ್‍ಪಿ ಕಾರ್ಯಕ್ರಮದಡಿ ಕೈಗೊಂಡಿರುವ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತು ಜನವರಿ 7 ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಾಜ್ಯ ಪರಿಷತ್ ಸಭೆ ನಡೆಯಲಿದೆ ಎಂದು ತಿಳಿಸಿದರು.

ಹಾಡಿಯಲ್ಲಿ ಡಿ.31 ರಂದು ವಾಸ್ತವ್ಯ: ಹಳಿಯಾಳ ತಾಲೂಕಿನ ಅರಣ್ಯ ಮಧ್ಯದಲ್ಲಿರುವ ವಾಡಾ ಎಂಬ ಸಿದ್ದಿ ಸಮುದಾಯದ ಕಾಲೋನಿ (ಹಾಡಿ) ಯಲ್ಲಿ ಪ್ರತಿ ವರ್ಷ-ದಂತೆ ಈ ವರ್ಷವೂ ಹೊಸ ವರ್ಷ ಆಚರಣೆ ಮಾಡಲಾಗುವುದು. ವಾಡಾ ಸಿದ್ದಿ ಕಾಲೋನಿಯಲ್ಲಿಯೇ ಅಂದು ಜಿಲ್ಲೆಯಲ್ಲಿರುವ ಎಲ್ಲಾ ಬುಡಕಟ್ಟು ಜನಾಂಗದವರು ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಲಾ-ಗು-ವುದು. ಜತೆಗೆ ಹಲವು ಸೌಲಭ್ಯಗಳನ್ನು ವಿತರಿಸಲಾಗುವುದು ಎಂದು ಸಚಿವ ಆಂಜನೇಯ ತಿಳಿಸಿದರು.

ಅಂದು ಸಂಜೆ ಸಿದ್ದಿ ಜನಾಂಗದ ಸಾವೇರ ಕೈತಾನ್ ಗಾಡಿ ಹಾಗೂ ಕ್ಲೇರಾ ಮನೆಯಲ್ಲಿ ವಾಸ್ತವ್ಯ ಹೂಡಿ ಹೊಸ ವರ್ಷವನ್ನು ಸರಳವಾಗಿ ಆಚರಿಸಲಾಗುವುದು. ಅರಣ್ಯವಾಸಿಗಳ ಸಮಗ್ರ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆ-ಗಳನ್ನು ಜಾರಿಗೊಳಿಸುತ್ತಿದೆ. ಜತೆಗೆ ವಿಶೇಷ ಕೊಡುಗೆಗಳನ್ನು ನೀಡಲು ನಿರ್ಧರಿಸಿದೆ. ಹೊಸ ವರ್ಷದ ಘೋಷಣೆಯಾಗಿ ಅಂದು ಸಿದ್ದಿ ಕಾಲೋನಿಯಲ್ಲಿ ಪ್ರಕಟಿಸಲಾಗುವುದು ಎಂದರು. ಈಗಾಗಲೇ ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಾಡಿ ವಾಸ್ತವ್ಯ ಮಾಡಿ ಪ್ರತಿ ಜಿಲ್ಲೆಗೂ 10 ಕೋ.ರು. ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಹಲವು ಕಡೆ ಗಿರಿಜನ ನಿವಾಸಿಗಳಿಗೆ ಮನೆ ನಿರ್ಮಾಣ, ಹಾಲಿ ಇದ್ದ ಮನೆಗಳ ರಿಪೇರಿ, ಕುಡಿಯುವ ನೀರು, ಸೋಲಾರ್ ವಿದ್ಯುತ್ ದೀಪ, ಸಿಮೆಂಟ್ ರಸ್ತೆ ಮತ್ತಿತರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸುವು ದಕ್ಕೆ ಕೆಲವೊಂದು ನಿರ್ಬಂಧಗಳು ಇರುವುದರಿಂದ ಕೆಲಸ ವಿಳಂಬ ಆಗುತ್ತಿರುವುದು ನಿಜ ಎಂದು ಸಚಿವರು ಒಪ್ಪಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com