
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಸಾಮಾಜಿಕ ಹರಿಕಾರ ಡಿ. ದೇವರಾಜ್ ಅರಸ್ಗೆ ಅರಸ್ ಅವರೇ ಸಾಟಿ. ನಾನು ಎಂದಿಗೂ ಅವರಾಗಲು ಸಾಧ್ಯವಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಅರಸ್ ಮತ್ತು ಆಧುನಿಕ ಕರ್ನಾಟಕ ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ದೇವರಾಜ್ ಅರಸ್ ಅವರ ಸಾಮಾಜಿಕ ಬದ್ಧತೆ ಅಳವಡಿಸಿಕೊಂಡಿದ್ದೇನೆ, ಅದನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಗಬೇಕೆಂಬ ಉದ್ದೇಶದಿಂದ ವಿರೋಧದ ನಡುವೆಯೂ ಹಾವನೂರು ವರದಿ ಜಾರಿಗೆ ತಂದರು. ಇದು ಐತಿಹಾಸಿಕ ನಿರ್ಣಯವಾಯಿತು. ಇಂತಹ ವಿಷಯಗಳನ್ನು ಮತ್ತು ಅರಸು ಬದುಕು, ವಿಚಾರಗಳ ಬಗ್ಗೆ ಯುವ ಜನಾಂಗ ತಿಳಿಯುವ ಜತೆಗೆ ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು.
ದೇವರಾಜ್ ಅರಸ್ ಮುಖ್ಯಮಂತ್ರಿಯಾಗುವ ಮೊದಲೇ ಸಾಮಾಜಿಕ ನ್ಯಾಯ ಪರಿಕಲ್ಪನೆ ಇತ್ತು. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿಯೇ ಬಸವಣ್ಣನವರು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದರು. ನಂತರ ಸಂವಿಧಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು. ಆದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದಿದ್ದರಿಂದ ಅರಸ್ ಭಿನ್ನವಾಗಿ ಕಂಡರು ಎಂದು ಹೇಳಿದರು.
ಮೀಸಲಾತಿ ಅನಿವಾರ್ಯ: 1972 ರಿಂದ 78ರ ಅವಧಿಯಲ್ಲಿ ಅರಸ್ ದಲಿತರು, ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಿದ್ದರಿಂದ ವಿಧಾನಸಭೆ ಹಾಗೂ ಲೋಕಸಭೆಗೆ ಸ್ಪರ್ಧಿಸಲು ಸಾಧ್ಯವಾಯಿತು. ಹಿಂದುಳಿದ ವರ್ಗದವರನ್ನು ಗುರುತಿಸಿ ರಾಜಕೀಯ ಕ್ಷೇತ್ರದಲ್ಲಿ ಅವಕಾಶ ನೀಡಿದ್ದರಿಂದಲೇ ಅನೇಕರು ರಾಜಕೀಯ ಪ್ರವೇಶಿಸಿದರು.
ಆದರೆ ಇಂದಿಗೂ ಎಷ್ಟೋ ಜಾತಿಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿಯೇ ಶೈಕ್ಷಣಿಕ, ಸಾಮಾಜಿಕ, ಅರ್ಥಿಕ ಸರ್ವೆ ನಡೆಸಲಾಗಿದೆ. ಸರ್ವೆಯಿಂದ ಜಾತಿಗಳನ್ನು ಒಡೆಯಲಾಗುತ್ತಿದೆ ಎಂಬ ಆರೋಪ ಮಾಡಲಾಗುತ್ತಿದೆ. ವರದಿ ಬಂದ ನಂತರ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುವುದು ಎಂದರು. ದೇವರಾಜ್ ಅರಸ್ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಚ್. ವಿಶ್ವನಾಥ್ ಮಾತನಾಡಿ, ಆರಸ್ ಅವರು ಆಧುನಿಕ ಕರ್ನಾಟಕ ಕಟ್ಟಿದ ಪರಿ ಯುವ ಜನಾಂಗಕ್ಕೆ ತಲುಪಬೇಕು. ಅರಸರ ಆಡಳಿತ ಆದರ್ಶ ಹೇಗೆ ಆದರ್ಶವಾಯಿತು ಎಂಬುದಕ್ಕೆ ಮುಖ್ಯಮಂತ್ರಿಗಳ ಹಲವು ಯೋಜನೆಗಳೇ ಸಾಕ್ಷಿ. ಆದರೆ ಮುಖ್ಯಮಂತ್ರಿಗಳ ಭಾಗ್ಯ ಯೋಜನೆಗಳು ಸ್ಥಿರವಾಗಿ ನಿಲ್ಲುವುದಿಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ವರದಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.
Advertisement