ಕರಾವಳಿ ಗಮ್ಮತ್ತು

ಅಲ್ಲಿ ನೆರೆದಿದ್ದ ಜನರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ನಮ್ಮವರೆಲ್ಲರೂ ಒಟ್ಟಿಗೆ ಸೇರಿದ್ದೇವೆ ಎಂಬ ಧನ್ಯತಾ ಭಾವ, ಒಂದೇ...
ಕರಾವಳಿ ಖಾದ್ಯ
ಕರಾವಳಿ ಖಾದ್ಯ

ಬೆಂಗಳೂರು: ಅಲ್ಲಿ ನೆರೆದಿದ್ದ ಜನರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ನಮ್ಮವರೆಲ್ಲರೂ ಒಟ್ಟಿಗೆ ಸೇರಿದ್ದೇವೆ ಎಂಬ ಧನ್ಯತಾ ಭಾವ, ಒಂದೇ ಊರಿನವರು ಬೆಂಗಳೂರಿನಂತಹ ಮಹಾ ನಗರದಲ್ಲಿ ಒಗ್ಗೂಡಿ ಸೇರಿ ಒಂದೇ ಮನೆಯ ಮಂದಿಯ ಹಾಗೆ ಆಟ, ಊಟ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಊರಿನ ನಡೆ, ನುಡಿ ಹಾಗೂ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದ್ದರು.ಕರಾವಳಿ ಹಬ್ಬಕ್ಕೆ ಮನೆ ಹಿರಿಯರಿಂದ ಕಿರಿಯರು ಒಗ್ಗೂಡಿ ಬಂದು ತಮ್ಮ ಊರಿನ ಖಾದ್ಯಗಳಾದ ಕಾಯಿ ಕಡುಬು, ಗೋಲಿ ಬಜೆ, ಪತ್ರೊಡೆ, ನೀರು ದೋಸೆಯನ್ನು ಆಸ್ವಾದಿಸುತ್ತಿದ್ದರು. ಬಗೆ ಬಗೆಯ ಖಾದ್ಯಗಳನ್ನು ಪಡೆಯಲು ಮಾರುದ್ದ ಕ್ಯೂ ಅದಂತೂ ಕರಗುತ್ತಲೇ ಇರಲಿಲ್ಲ. ಕೈಗೆಟಕುವ ದರದಲ್ಲಿ ಊರಿನ ವಿಶೇಷ ಅಡುಗೆ ಸವಿಯುತ್ತಿದ್ದೇವೆ. ನಮ್ಮ ಊರಿನ ವಾತಾವರಣವೇ ಸೃಷ್ಟಿಗೊಂಡಿದೆ. ಊರಿನಲ್ಲಿ ನಡೆಯುವ ಸಂತೆಯ ನೆನಪನ್ನು ಮರುಕಳಿಸುವಂತಿದೆ ಎನ್ನವುದು ಹಲವರ ಅನುಭವ. ಇಂತಹ ವಿಶೇಷ ವಾತಾವರಣ ಕಂಡು ಬಂದಿದ್ದು, ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ಆಯೋಜಿಸಿದ್ದ `ನಮ್ಮೂರ ಹಬ್ಬ-2015'ದಲ್ಲಿ. ಮಂಗಳೂರಿನಿಂದ ಬಂದಿದ್ದ ಮಟ್ಟುಗುಳ್ಳ, ಮಂಗಳೂರು ಸೌತೆಕಾಯಿ, ಅಲಸಂದೆ ಸುವರ್ಣ ಗಡ್ಡೆಯನ್ನು ಜನ ಮುಗಿಬಿದ್ದು ಖರೀದಿಸಿದರು. ಮಲೆನಾಡಿನಲ್ಲಿ ಕೃಷಿ ಸಮಯದಲ್ಲಿ ಕೃಷಿಕರು ಉಪಯೋಗಿಸುವ ಮಂಡೆಹಾಳೆಯ ಯುವಕರು ಸಂಸ್ಕೃತಿಯ ಪ್ರತೀಕದಂತೆ ಕುಳಿತಿತ್ತು. ತುಳುನಾಡಿನ ವಿಶೇಷವಾದ ಓಲೆ ಬೆಲ್ಲ, ಓಲೆ ಚಾಪೆಗಂತೂ ಎಲ್ಲಿಲ್ಲದೆ ಬೇಡಿಕೆ. ಸಂಜೆಯಾಗುತ್ತಿದ್ದಂತೆ ಮೈದಾನಕ್ಕೆ ಜನ ಸಾಗರೋಪಾದಿಯಲ್ಲಿ ಬಂದು ಸೇರಿದರು. ಇದರೊಂದಿಗೆ ರಾಜ್ ಲಡ್ಡು ಎಂದು ಮಾರಾಟವಾಗುತ್ತಿದ್ದ ಲಡ್ಡುವನ್ನು ಜನರು ತಮ್ಮ ನೆಚ್ಚಿನ ನಟ ಡಾ. ರಾಜ್‍ರನ್ನು ನೆನಪು ಮಾಡಿಕೊಂಡು ಖರೀದಿಸುತ್ತಿದ್ದು, ಸಾಂಸ್ಕೃತಿಕ ನಾಯಕನ ಆರಾಧಿಸುವ ಮತ್ತೊಂದು ಪರಿಯಾಗಿತ್ತು. ತಮ್ಮವರೊಂದಿಗೆ ಒಟ್ಟಿಗೆ ಕಲಿತು ಸಂತೆಯಲ್ಲಿ ಖರೀದಿಸುವ ವ್ಯವಸ್ಥೆಯೊಂದಿಗೆ ಹಿರಿಯರಿಗೆ ಕಿರಿಯರಿಗೆ ಲಗೋರಿ, ಹಗ್ಗಜಗ್ಗಾಟ ಮತ್ತಿತ್ತರ ಗ್ರಾಮೀಣ ಕಲೆಗಳು ಕೃತಕತೆಗೆ ಅವಕಾಶವಿಲ್ಲದೆ ಗ್ರಾಮೀಣ ಪರಿಸರಕ್ಕೆ ಇಂಬು ನೀಡಿತ್ತು. ಇದರೊಂದಿಗೆ ಚಿಣ್ಣರಿಗಾಗಿ ನಡೆಸಿದ ಮುದ್ದು ಕೃಷ್ಣ, ಮುದ್ದುರಾಧೆಯಲ್ಲಿ ಮಕ್ಕಳು ಮುಗ್ದ  ಚೆಲುವಿನೊಂದಿಗೆ ಹೆಜ್ಜೆ ಹಾಕಿದರು. ತುಳುನಾಡಿನ ಗಾಯಕರು ಯುವಕರ ಮನ ಹುಚ್ಚು ಹೊಳೆಯಲ್ಲಿ ತೇಲುವಂತೆ ಗಾಯನ ಮಾಡಿದರೆ ಶಶಿಧರ್ ಕೋಟೆ ಹಾಗೂ ಪುತ್ತೂರಿನ ಜಗದೀಶ್ ಭಕ್ತಿಯ ಪರಾಕಾಷ್ಠೆ ಮುಟ್ಟುವಂತಹ ಗಾಯನ ಪ್ರಸ್ತುತಪಡಿಸಿದರು. ಗಾಯನಕ್ಕೆ ಕೇಂದ್ರ ಸಚಿವ ಸದಾನಂದಗೌಡ ಸಾಥ್ ನೀಡಿದ್ದು ಮತ್ತೊಂದು ವಿಶೇಷ.ಜಾದುಗಾರ ಸಮರ್ಥ್, ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಜಾದೂವಿನ ಮೂಲಕವೇ ವೇದಿಕೆಗೆ ಕರೆ ತಂದಾಗ ಸಚಿವರು ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಜನರಿಗೆ ಮೋಡಿ ಮಾಡಿದರು. ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ತುಳು ಸಂಭ್ರಮದಲ್ಲಿ ಹೆಜ್ಜೆಹಾಕಿದರು. ಇದೇ ಸಂದರ್ಭದಲ್ಲಿ ಕಬಡ್ಡಿ ಪಟು ಮಮತಾ ಪೂಜಾರಿ ಹಾಗೂ ಹಿರಿಯ ನಟಿ ಲೀಲಾವತಿ ಅವರಿಗೆ ಕಿರೀಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಡಲತಡಿಯ ಘಮಲು
ಮಂಗಳೂರಿನಿಂದ ಪಾಕತಜ್ಞರು ಮೀನಿನ ಖಾದ್ಯ, ಕೋರಿ ರೊಟ್ಟಿ ಜತೆಗೆ ಮೀನು, ಸಿಗಡಿ ಬಳಸಿ ತಯಾರಿಸಿದ ವಿಶೇಷ ಖಾದ್ಯಗಳನ್ನು ಇಲ್ಲಿ ನೆಲೆಸಿರುವ
ಕರಾವಳಿ ಬಂಧುಗಳಿಗೆ ಉಣ ಬಡಿಸಿದರು. ಮಂಗಳೂರಿನಲ್ಲಿ ಪೂಜೆ ಹಾಗೂ ವಿಶೇಷ ಕಾರ್ಯಗಳಿಗೆ ಬಳಕೆಯಾಗುವ ಹೊಂಬಾಳೆ, ಕೆಂಪು ಅಕ್ಕಿಯ ಅನ್ನವನ್ನು
ಬಸಿಯಲಿಕ್ಕೆ ಉಪಯೋಗಿಸುವ ಸಿಬ್ಲು, ತುಳುನಾಡ ಕತ್ತಿಗಳು ಎಲ್ಲೆಲ್ಲೂ ಕಡಲತಡಿಯ ಘಮಲು ಮನೆ ಮಾಡಿತ್ತು.


ತುಳುನಾಡಿನ ಜನ ಯಾವುದೇ ಊರಿಗೆ ಹೋದರೂ ಆ ಊರಿನವರೇ ಆಗಿ ಬದುಕುತ್ತಾರೆ. ಬೆಂಗಳೂರಿನಲ್ಲೂ ಅಂತಹ ಒಂದು ವಾತಾವರಣ ಸೃಷ್ಟಿಸಿಕೊಂಡಿದ್ದಾರೆ. ಪರುಶರಾಮ ಸೃಷ್ಟಿಸಿದ ನೆಲದ ಜನ ಉಗ್ರ, ಶಾಂತ ಎರಡಕ್ಕೂ ಸೈ. ತೆರೆಗಳ ಮಧ್ಯೆ ಬದುಕುವ ಜನ ಹಲವು ಸವಾಲುಗಳನ್ನು ಎದುರಿಸಿ ಬದುಕುವುದನ್ನು ಕರಗತಮಾ ಡಿಕೊಂಡಿದ್ದಾರೆ. ಜಗತ್ತಿನೆಲ್ಲೆಡೆ ಬದುಕು ಕಟ್ಟಿಕೊಳ್ಳವ ಸಾಮರ್ಥ್ಯ ಪಡೆದು ಕೊಂಡಿದ್ದಾರೆ. ಯಾವಗಲೂ ಹೊಸ ವಿಚಾರಗಳನ್ನು ಕಲಿಯಲು ಮುಂದಿರುತ್ತಾರೆ.
- ಡಿ.ವಿ. ಸದಾನಂದ ಗೌಡ, ಕೇಂದ್ರ ಕಾನೂನು ಸಚಿವ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com