ವಿಧಾನಸಭೆ: ಜಿಮ್-1 ಮತ್ತು ಜಿಮ್ -2 (ವಿಶ್ವ ಬಂಡವಾಳ ಹೂಡಿಕೆ ಸಮಾವೇಶ)ದಲ್ಲಿ ನೀಡಿದ ಭೂಮಿಯನ್ನು ಇನ್ನೂ ಕೈಗಾರಿಕಾ ಉದ್ದೇಶಕ್ಕೆ ಬಳಸಿಕೊಳ್ಳದ ಉದ್ಯಮಪತಿಗಳಿಂದ ಸರ್ಕಾರ ಜಾಗ ವಶಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಮಾಡಿಕೊಂಡಿರುವ ಒಡಂಬಡಿಕೆ ಬಗ್ಗೆ ವಿಧಾನಸಭೆಯಲ್ಲಿ ನಡೆದ ಅರ್ಧಗಂಟೆ ಅವಧಿಯ ಚರ್ಚೆ ಸಂದರ್ಭದಲ್ಲಿ ಈ ಆಗ್ರಹ ಮಾಡಿರುವ ಅವರು, ರಾಜ್ಯ ಸರ್ಕಾರದ ಕೈಗಾರಿಕಾ ನೀತಿಯಲ್ಲಿ ಭವಿಷ್ಯದ ಮುನ್ನೋಟವಿದೆ. ಮಹಿಳೆಯರಿಗೆ, ಶೋಷಿತ ವರ್ಗದವರಿಗೆ ಕೈಗಾರಿಕೋದ್ಯಮಿಗಳಾಗಲು ಹಲವು ಪ್ರೋತ್ಸಾಹದಾಯಕ ಅಂಶಗಳಿವೆ. ಆದರೆ ಕೈಗಾರಿಕಾ ಇಲಾಖೆಯಲ್ಲಿರುವ ಭ್ರಷ್ಟಾಚಾರ ಮತ್ತು ಅನಗತ್ಯ ಪರಿಶೀಲನೆಗಳಿಂದ ಉದ್ಯಮಿಗಳು ರಾಜ್ಯಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು.
ಕೈಗಾರಿಕಾ ಇಲಾಖೆಯಲ್ಲಿ ಏಕಗವಾಕ್ಷಿ ಯೋಜನೆ ಜಾರಿಯಲ್ಲಿದೆ ಎನ್ನುತ್ತಾರೆ. ಆದರೆ ಅದರೊಳಗೆ 30 ಬಾಗಿಲುಗಳಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಲಕ್ಷಾಂತರ ಎಕರೆ ಜಾಗವನ್ನು ಉದ್ಯಮಿಗಳಿಗೆ ನೀಡಿದ್ದಾರೆ. ಬ್ರಹ್ಮಿಣಿ ಸ್ಟೀಲ್ಸ್ಗೆ ತಲಾ ರು. 5 ಲಕ್ಷಕ್ಕೆ 5000 ಎಕರೆ ನೀಡಿದ್ದರು. ಎಕರೆ ಜಮೀನು ನೀಡಲಾಗಿತ್ತು. ಆದರೆ ಬ್ರಹ್ಮಿಣಿ ಸಂಸ್ಥೆ ರು. 25 ಲಕ್ಷಕ್ಕೆ ಒಂದು ಎಕರೆಯಂತೆ ಮಂಜೂರಾದ ಜಾಗ ಮಾರಾಟ ಮಾಡಿದೆ. ಆರಾಧ್ಯ ಸ್ಟೀಲ್ಗೆ 980, ಜುವಾರಿ ಫರ್ಟಿಲೈಸರ್ಗೆ 950, ಸುರಾನಾ ಇಂಡಸ್ಟ್ರೀಸ್ಗೆ 168, ಸುರಾನಾ ಪವರ್ಗೆ 600, ಭೂಷಣ್ ಸ್ಟೀಲ್ಗೆ 4000, ಟಾಟಾ ಸ್ಟೀಲ್ಗೆ 2500, ರೇಣುಕಾ ಇನ್ ಫ್ರಾಸ್ಟಕ್ಚರ್ಗೆ 1100, ರವೀಂದ್ರ
ಟ್ರೇಡಿಂಗ್ಗೆ 650, ಡೆಲ್ಟಾಕ್ಕೆ 700, ಮಿತ್ತಲ್ಗೆ 4000 ಎಕರೆ ಜಾಗ ನೀಡಲಾಗಿದೆ. ಸುರು 1 ಲಕ್ಷ 79 ಸಾವಿರ ಎಕರೆ ಜಾಗವನ್ನು ಜಿಮ್-1 ಮತ್ತು 2ರ ಒಡಂಬಡಿಕೆ ಪ್ರಕಾರ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ನೀಡಿದೆ.
ಈ ಪೈಕಿ ಯಾವ ಸಂಸ್ಥೆಯೂ ಉದ್ದಿಮೆ ಆರಂಭಿಸಿಲ್ಲ ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ನೀವು 371-ಜೆಗೆ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಇದೆಲ್ಲವನ್ನೂ ಯೋಚನೆ ಮಾಡಬೇಕಿತ್ತು ಎಂದರು. ಇದರಿಂದ ಕೆರಳಿದ ಕಾಂಗ್ರೆಸ್ ನ ಪ್ರಿಯಾಂಕ ಖರ್ಗೆ, 371-ಜೆಗೂ ಕೈಗಾರಿಕಾ ಅಭಿವೃದ್ಧಿಗೂ ಎತ್ತಣ ಸಂಬಂಧ ಎಂದು ಖಾರವಾಗಿ ಪ್ರಶ್ನಿಸಿದರು.
Advertisement