ಕೆಪಿಎಸ್ಸಿ ನೇಮಕಕ್ಕೆ ಅಡ್ಡಿ
ಬೆಂಗಳೂರು: ಕೆಪಿಎಸ್ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ಸಂಬಂಧ ಸರ್ಕಾರದ ಪ್ರಸ್ತಾಪಕ್ಕೆ ಕಂಟಕ ಎದುರಾಗಿದ್ದು, ಪಟ್ಟಿಯಲ್ಲಿನ ವ್ಯಕ್ತಿಗಳ ಬಗ್ಗೆ ರಾಜ್ಯಪಾಲರು ಕೆಲ ಸ್ಪಷ್ಟೀಕರಣ ಕೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ರಾಜ್ಯಪಾಲರನ್ನು ಶುಕ್ರವಾರ ಭೇಟಿ ಮಾಡಿ ಶಿಫಾರಸ್ಸನ್ನು ಒಪ್ಪುವಂತೆ ಮನವಿ ಮಾಡಿದ್ದರು. ಆದರೆ ಅದೇ ದಿನ ಸಾಯಂಕಾಲ ರಾಜಭವನದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಕಚೇರಿಗೆ ಸ್ಪಷ್ಟೀಕರಣ ಕೇಳಿದ ಪತ್ರ ರವಾನೆಯಾಗಿತ್ತು. ಇದಕ್ಕೆ ಸರ್ಕಾರ ಶನಿವಾರ ಸಂಜೆಯೇ ಸ್ಪಷ್ಟೀಕರಣ ಕಳುಹಿಸಿದೆ.
ಅಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡ ವಿ.ಆರ್.ಸುದರ್ಶನ್ ಸದಸ್ಯರಾದ ರಫುನಂದನ್ ರಾಮಣ್ಣ, ಗೋವಿಂದಯ್ಯ ಬಗ್ಗೆ ಇನ್ನಷ್ಟು ಮಾಹಿತಿ ನೀಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಇದರೊಂದಿಗೆ ಕೆಪಿಎಸ್ಸಿ ನೇಮಕ ಪ್ರಕ್ರಿಯೆಗೆ ಕಾನೂನು ಮತ್ತು ರಾಜಕೀಯ ಅಡ್ಡಿ ಏಕಕಾಲಕ್ಕೆ ಅಂಟಿಕೊಂಡಿದ್ದು, ಸರ್ಕಾರದಿಂದ ಸ್ಪಷ್ಟೀಕರಣ ವರದಿ ಸಲ್ಲಿಕೆಯಾಗುವವರೆಗೆ ರಾಜ್ಯಪಾಲರು ಅಂಕಿತ ಹಾಕುವುದಿಲ್ಲ. ಸರ್ಕಾರ ವಿವರಣೆ ನೀಡಿದರೂ ಅಂಕಿತ ಹಾಕುತ್ತಾರಾ, ಇಲ್ಲವಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಏಕೆ ಸ್ಪಷ್ಟೀಕರಣ: ಸರ್ಕಾರ ಶಿಫಾರಸು ಪತ್ರ ಕಳುಹಿಸಿದ ಮರುದಿನದಿಂದಲೇ ಈ ಪಟ್ಟಿಯ ಬಗ್ಗೆ ಅಪಸ್ವರ ವ್ಯಕ್ತವಾಗಿತ್ತು. ಸುದರ್ಶನ ರಾಜಕೀಯ ವ್ಯಕ್ತಿ ಎಂಬುದು ಬಿಜೆಪಿ ವಿರೋಧಕ್ಕೆ ಕಾರಣ. ಜತೆಗೆ ಪಟ್ಟಿಯಲ್ಲಿರುವ ನಾಲ್ವರ ಬಗ್ಗೆಯೂ ಆರೋಪ ಕೇಳಿಬಂದಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ, ರಾಜ್ಯಪಾಲರು ಪಟ್ಟಿ ತಿರಸ್ಕರಿಸಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರು ಸ್ಪಷ್ಟೀಕರಣ ಕೇಳುವುದು ಸಾಮಾನ್ಯ. ಆ ನಿಟ್ಟಿನಲ್ಲಿ ರಾಜಭವನದಿಂದ ಪತ್ರ ಬಂದಿರಬಹುದು ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ