ಬೆಂಗಳೂರು: ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದಗೌಡ ಅವರ ಪುತ್ರ ಕಾರ್ತಿಕ್ಗೌಡ ವಿರುದ್ಧ ದಾಖಲಾಗಿರುವ ಅತ್ಯಾಚಾರ ದೂರನ್ನು ರದ್ದು ಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಕಾರ್ತಿಕ್ಗೌಡ ತನ್ನನ್ನು ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆಂದು ಮೈತ್ರಿಯಾ ಗೌಡ ದೂರು ದಾಖಲಿಸಿದ್ದಳು. ಮೈತ್ರಿಯಾ ದಾಖಲಿಸಿರುವ ದೂರಿನಲ್ಲಿ ಯಾವುದೇ ಸತ್ಯಾಂಶಗಳಿಲ್ಲ ಆದ್ದರಿಂದ ಅದನ್ನು ರದ್ದು ಪಡಿಸಬೇಕೆಂದು ಕಾರ್ತಿಕ್ ಗೌಡ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾ.ಆರ್.ಬಿ. ಬೂದಿಹಾಳ್ ಅವರ ಪೀಠ, ಎರಡೂ ಕಡೆಯ ವಾದ ಪ್ರತಿವಾದ ಆಲಿಸಿ ತೀರ್ಪ ಕಾಯ್ದಿರಿಸಿದೆ. ಕಾರ್ತಿಕ್ ಗೌಡ ಪರ ಹಿರಿಯ ವಕೀಲ ನಟರಾಜ್ ವಾದ ಮಂಡಿಸಿ, ಮೈತ್ರಿಯಾ ಗೌಡ ದಾಖಲಿಸಿರುವ ದೂರು ದುರುದ್ದೇಶದಿಂದ ಕೂಡಿದ್ದು ಅದರಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಆಕೆಯನ್ನು ಮದುವೆ ಆಗಲು ನಮ್ಮ ಕಕ್ಷಿದಾರ ನಿರಾಕರಿಸಿದ್ದ ಎಂಬ ಮಾತ್ರಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಇದು ದುರುದ್ದೇಶದಿಂದ ಕೂಡಿದೆ ಎಂದು ವಾದಿಸಿದರು.
Advertisement