ಬೆಂಗಳೂರು: ಸರೋಜಿನಿ ಮಹಿಷಿ ವರದಿ ಇನ್ನೂ ಏಕೆ ಅನುಷ್ಠಾನವಾಗಿಲ್ಲ ಎನ್ನುವುದಕ್ಕೆ ಅವರ ನಿಧನದ ನಂತರ ಪ್ರಾಮಾಣಿಕ ಉತ್ತರ ದೊರೆತಿದೆ! ಮಹಿಷಿ ಅವರು ನಿಧನರಾಗಿ ಮೂರು ದಿನಗಳಾದ ಬಳಿಕ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶ್ರದ್ಧಾಂಜಲಿ ಕಳುಹಿಸುವ ಮೂಲಕ ತನ್ನ ಕನ್ನಡ ಕಾಳಜಿ ಪ್ರದರ್ಶಿಸಿದೆ. ಜ.25ರಂದೇ ನಿಧನರಾದ ಮಹಿಷಿಗೆ ಮಾಧ್ಯಮಗಳ ಮೂಲಕ ಶ್ರದ್ಧಾಂಜಲಿ ಪ್ರಕಟಿಸಲು ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ ಅವರಿಗೆ ಜ.28ರವರೆಗೂ ಸಮಯವೇ ಸಿಕ್ಕಿರಲಿಲ್ಲ. ಕನ್ನಡ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ಮೂರು ದಶಕಗಳ ಹಿಂದೆ ಮಹಿಷಿ ನೀಡಿದ್ದ ವರದಿ ಅನುಷ್ಠಾನಕ್ಕೆ ಬಾರದಿರಲು ಸರ್ಕಾರದ ಇಂಥ ನಿರ್ಲಕ್ಷ್ಯ ಗಳೇ ಕಾರಣ. ವಿಪರ್ಯಾಸವೆಂದರೆ ಅವರ ನಿಧನ ಸಂತಾಪಕ್ಕೂ ಇಂಥ ವಿಳಂಬವೇ ಕಾರಣ.ಜ.25, 26ರಂದು ಸರ್ಕಾರಿ ರಜೆ ಇದ್ದ ಕಾರಣ ಶ್ರದ್ಧಾಂಜಲಿ ಕಳುಹಿಸುವ ಗೋಜಿಗೆ ಪ್ರಾಧಿಕಾರದ ಅಧ್ಯಕ್ಷರು ಹೋಗಿರಲಿಲ್ಲ. ಜ.27ರಂದು ಶ್ರದ್ಧಾಂಜಲಿ ಪತ್ರಕ್ಕೆ ಎಲ್. ಹನುಮಂತಯ್ಯ ಸಹಿ ಹಾಕಿದ್ದರು. ಅಧಿಕಾರಿಗಳ ಧೋರಣೆಯಿಂದ ಮತ್ತೊಂದು ದಿನ ತಡವಾಗಿ ಪತ್ರಿಕಾ ಪ್ರಕಟಣೆಯನ್ನು ಎಲ್ಲ ಮಾಧ್ಯಮಗಳಿಗೆ ಕಳುಹಿಸಿದ್ದಾರೆ. ಸರೋಜಿನಿ ಮಹಿಷಿ ವರದಿ ಅನುಷ್ಠಾನ ಹಾಗೂ ಪರಿಷ್ಕೃತ ವರದಿ ಅನುಷ್ಠಾನದ ಜವಾಬ್ದಾರಿಯೂ ಇದೇ ಪ್ರಾಧಿಕಾರದ ಮೇಲಿದೆ. ಪ್ರಾಧಿಕಾರ ಸ್ಥಾಪನೆಯಾದ ಉದ್ದೇಶವೂ ಇದೇ ಆಗಿತ್ತು. ಸರ್ಕಾರ ಮಟ್ಟದಲ್ಲಿ ಮಹಿಷಿ ವರದಿ ಪ್ರಸ್ತಾಪ ಹಾಗೂ ಚರ್ಚೆಯಾಗುತ್ತಿರುವುದೂ ಕನ್ನಡ
ಅಭಿವೃದ್ಧಿ ಪ್ರಾಧಿಕಾರದಲ್ಲಿ ಮಾತ್ರ. ಆದರೆ ಪ್ರಾಧಿಕಾರದ ಜವಾಬ್ದಾರಿ ಹೊತ್ತ ಅಧ್ಯಕ್ಷರೇ ನಿರ್ಲಕ್ಷ್ಯ ತೋರಿರುವುದು ಆಶ್ಚರ್ಯ ಮೂಡಿಸಿದೆ.
Advertisement