ಮೇಲುಕೀಳು ಇರುವವರೆಗೂ ಡಾ.ಅಂಬೇಡ್ಕರ್ ಪ್ರಸ್ತುತ
ಬೆಂಗಳೂರು:ಇಂದಿಗೂ ನಾವು ಅಂಬೇಡ್ಕರ್ ವಿಚಾರಧಾರೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ, ಜಾತಿ, ಉಪ ಜಾತಿಗಳ ಮೂಲಕ ಇನ್ನಷ್ಟು ವಿಘಟಿತರಾಗಿದ್ದೇವೆ ಎಂದು ಕೆಎಸ್ ಟಿಡಿಸಿ ಅಧ್ಯಕ್ಷ ಎಸ್.ಎ.ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಅಂಬೇಡ್ಕರ್ ಎಂದೂ ಜಾತಿ ಕಟ್ಟಲಿಲ್ಲ, ಎಲ್ಲರೂ ಒಂದೇ ಅಂದರು. ಅಂದು ಬ್ರಿಟಿಷರು ಒಡೆದು ಆಳುವ ನೀತಿಗಾಗಿ ಬಿತ್ತಿದ ವಿಷ ಇಂದೂ ಇದೆ. ನಮಗಿನ್ನೂ ಸರಿಯಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ಹನುಮಂತಯ್ಯ ಮಾತನಾಡಿ, ಅಂಬೇಡ್ಕರ್ ಅಸಮಾನತೆ ಹೋಗಲಾಡಿಸುವ ಮಾರ್ಗ ತೋರಿಸಿಕೊಟ್ಟರು, ಅದನ್ನು ನಾವು ಪದೇ ಪದೇ ನೆನಪು ಮಾಡಿಕೊಳ್ಳುತ್ತಿದ್ದೇವೆ. ಎಲ್ಲಿಯವರೆಗೆ ಅಸಮಾನತೆ, ಮೇಲುಕೀಳೆಂಬ ಭೇದಭಾವ ಹೋಗುವುದಿಲ್ಲವೋ ಅಲ್ಲಿಯವರೆಗೆ ನೆನಪು ಮಾಡಿಕೊಳ್ಳುತ್ತಲೇ ಇರಬೇಕಾಗುತ್ತದೆ ಎಂದರು.
ಭಗವದ್ಗೀತೆ ರಾಷ್ಟ್ರೀಯ ಗ್ರಂಥ ಮಾಡಬೇಕೆಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಸಂವಿಧಾನವೇ ನಮ್ಮ ರಾಷ್ಟ್ರೀಯ ಗ್ರಂಥ. ಭಗವದ್ಗೀತೆ ಧರ್ಮಗ್ರಂಥ, ಅದರಲ್ಲಿ ಅಮಾನವೀಯ ಸಂಗತಿ ಇದ್ದರೆ ಟೀಕಿಸುವ ಅವಕಾಶವೂ ಇರಬೇಕಾಗುತ್ತದೆ ಎಂದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಭಗವದ್ಗೀತೆಯಲ್ಲಿ ಒಳ್ಳೆಯ ವಿಷಯಗಳಿರಬಹುದೇನೋ, ಆದರದು ಯುದ್ಧವನ್ನು ಪ್ರಚೋದಿಸುತ್ತದೆ ಎಂದರು.