ಆನ್ ಲೈನ್ ದೇವರುಗಳು ಆಫ್ ಲೈನ್!
ಬೆಂಗಳೂರು: ಪ್ರಮುಖ ದೇವಸ್ಥಾನಗಳಲ್ಲಿ ದೇವರ ಸೇವೆಗಾಗಿ ಮುಜರಾಯಿ ಇಲಾಖೆ ಆರಂಭಿಸಿದ್ದ ಬಹುನಿರೀಕ್ಷಿತ ಆನ್ ಲೈನ್ ವ್ಯವಸ್ಥೆ ಈಗ ಆಫ್ ಲೈನ್ ಆಗಿ ಭಕ್ತರನ್ನು ದಿಕ್ಕು ತಪ್ಪಿಸುತ್ತಿದೆ. ನೆಚ್ಚಿನ ದೇವರ ಸೇವೆಗೆ ಕ್ಲಿಕ್ ಮಾಡಿದರೆ ದೇವರ ಸೇವಾ ಭಾಗ್ಯವನ್ನು ಕಲ್ಪಿಸುವ ಬದಲಿಗೆ ಅದು ನಿಮ್ಮನ್ನು ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಎಳೆದು ಹೋಗಿ ಹೊಸ ಕೋರ್ಸ್ ಗಳ ಪರಿಚಯ ಮಾಡುತ್ತಿದೆ.
ದೇವಸ್ಥಾನಗಳಲ್ಲಿ ಹೆಚ್ಚುತ್ತಿರುವ ಭಕ್ತರ ಶೋಷಣೆ ಮತ್ತು ದೇವರ ಸೇವೆಗಳ ಗೊಂದಲ ತಪ್ಪಿಸಲು ಮುಜರಾಯಿ ಇಲಾಖೆ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ, ಮೈಸೂರು ಚಾಮುಂಡೇಶ್ವರಿ, ನಂಜನಗೂಡು ಶ್ರೀಕಂಠೇಶ್ವರ ಸೇರಿದಂತೆ ರೂ. 1 ಕೋಟಿಗೂ ಹೆಚ್ಚಿನ ಆದಾಯವಿರುವ 11 ಪ್ರಮುಖ ದೇವಸ್ಥಾಗಳಲ್ಲಿ ದೇವರ ದರ್ಶನ ಮತ್ತು ಸೇವೆಗಳನ್ನು ಆನ್ ಲೈನ್ ಮಾಡಿತ್ತು. ಈ ವಿನೂತನ ಯೋಜನೆಗೆ ಜೂನ್.11 ರಂದು ಮುಜರಾಯಿ ಸಚಿವ ಟಿಬಿ ಜಯಚಂದ್ರ ಚಾಲನೆ ನೀಡಿದ್ದರು. ಅಲ್ಲದೇ ಈ ಸೇವೆ ಲಭ್ಯವಿದ್ದು ಭಕ್ತರು ಬೆಂಗಳೂರು ಆನ್ ವೆಬ್ ಸೈಟ್ ಮೂಲಕ ದೇವಸ್ಥಾನಗಳ ಸೇವೆಯನ್ನು ಬುಕ್ಕಿಂಗ್ ಮಾಡಬಹುದು ಎಂದೂ ಹೇಳಿದ್ದರು.
ಅದರಂತೆ ಭಕ್ತರು ಬೆಂಗಳೂರು ಒನ್ ಮೂಲಕ ದರ್ಶನಗಳನ್ನು ಬುಕ್ಕಿಂಗ್ ಮಾಡಲು ಯತ್ನಿಸಿದರೆ ಪಾಪ ಅವರು ಬೆಂಗಳೂರು ವಿಶ್ವವಿದ್ಯಾನಿಲಯ ಸೇರುತ್ತಿದ್ದಾರೆ. ಅಂದರೆ ಬೆಂಗಳೂರು ಒನ್ ವೆಬ್ ಸೈಟ್ ಮೂಲಕ ಅಲ್ಲಿನ ಆನ್ ಲೈನ್ ಸೇವೆಗಳ ಒಳ ಹೊಕ್ಕರೆ ಅಲ್ಲಿ ಮುಜರಾಯಿ ಇಲಾಖೆ ದೇವಸ್ಥಾನಗಳ ಸೇವೆಗಳು ಸಿಗುತ್ತವೆ. ಹಾಗೆಂದು ಒಳಗೆ ಹೋದರೆ ಅದು ಬೆಂಗಳೂರು ವಿವಿ ವೆಬ್ ಸೈಟ್ ಗೆ ತೆರೆದುಕೊಳ್ಳುತ್ತದೆ. ವೆಬ್ ಸೈಟ್ ನ್ನು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಸೇವೆಗೆ ಸಿಗುವಂತೆ ಮಾಡದೆ ಯೋಜನೆಗೆ ಚಾಲನೆ ಸಿಗುವಂತೆ ಮಾಡಿದ್ದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಎನ್ನಲಾಗುತ್ತಿದೆ.
"ಮುಜರಾಯಿ ಇಲಾಖೆಗೆ ಸೇರಿದ ಪ್ರಮುಖ ದೇವಸ್ಥಾನಗಳಲ್ಲಿ ಆನ್ ಲೈನ್ ಸೇವೆ ಪ್ರಾರಂಭಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು ಎಲ್ಲಾ ಕಡೆ ಚೆನ್ನಾಗಿ ನಡೆಯುತ್ತಿದೆ. ಈತನಕ ಆನ್ ಲೈನ್ ನಲ್ಲಿ ಎಷ್ಟು ಬುಕ್ಕಿಂಗ್ ಆಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ಯಾವುದೇ ತೊಂದರೆಯಾಗಿಲ್ಲ".
- ಸಿಸಾನ್ ಅಲಿ ಖಾನ್- ಮುಜರಾಯಿ ಇಲಾಖೆ ಅಧೀಕ್ಷಕ
"ಆನ್ ಲೈನ್ ಸೇವೆಗಳನ್ನು ಬೆಂಗಳೂರು ಒನ್ ಗೆ ನೀಡಿದ್ದೇವೆ ಆದರೆ ಅದು ಎಲ್ಲಿಯೂ ಆಗುತ್ತಿಲ್ಲ. ಈ ಸೇವೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಇನ್ನೂ ಪೂರ್ಣ ರೀತಿಯಲ್ಲಿ ಆರಂಭಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಇ- ಆಡಳಿತ ಇಲಾಖೆಯ ನಿರ್ದೇಶಕರೊಂದಿಗೆ ಚರ್ಚಿಸಲಾಗುತ್ತಿದೆ".
-ನಾಗವೇಣಿ, ಮುಜರಾಯಿ ಇಲಾಖೆ ಅಧೀಕ್ಷಕಿ