ಬೆಂಗಳೂರು: ಲೋಕಾಯುಕ್ತ ನ್ಯಾ. ವೈ ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಸೈಟ್ ವೊಂದರ ಖಾತೆ ಮಾಡಿಸಿಕೊಡುವುದಾಗಿ ಹೇಳಿ 10 ಲಕ್ಷ ಪಡೆದು ವಂಚಿಸಿದ್ದಾರೆಂದು ಆರೋಪಿಸಿ ಲೋಕಾಯುಕ್ತ ಕಚೇರಿ ಲಂಚ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ(ಎಸ್.ಐ.ಟಿ) ಉದ್ಯಮಿ ಕೃಷ್ಣಮೂರ್ತಿ ಎಂಬುವವರು ದೂರು ನೀಡಿದ್ದಾರೆ.
ಕೋರಮಂಗಲದಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ತಮ್ಮ 8 ಗುಂಟೆ ಜಮೀನು ಖಾತೆ ಮಾಡಿಸುವ ವಿಚಾರ ಹಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ಬಾಕಿ ಉಳಿದಿತ್ತು ಬ್ರೋಕರ್ ಗಳಾದ ನರಸಿಂಹ ರಾವ್ ಹಾಗೂ ಸಾದಿಕ್ ಎಂಬುವವರು ಈ ಕೆಲಸಕ್ಕಾಗಿ ಅಶ್ವಿನ್ ರಾವ್ ಅವರನ್ನು ಪರಿಚಯ ಮಾಡಿಸಿಕೊಟ್ಟಿದ್ದರು. ಆರೇಳು ತಿಂಗಳ ಹಿಂದೆ ನಗರದ ಹೋಟೆಲ್ ವೊಂದರಲ್ಲಿ ಜಮೀನಿನ ವಿಚಾರವಾಗಿ ಅಶ್ವಿನ್ ರಾವ್ ಜೊತೆ ಮಾತುಕತೆ ನಡೆಸಿದ್ದೆ. ಈ ವೇಳೆ ಅವರು 20 ಲಕ್ಷಕ್ಕೆ ಖಾತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು.
ಸೈಟಿನ ದಾಖಲೆಗಳನ್ನು ಪರಿಶೀಲನೆ ನಡೆಸಬೇಕೆಂದು ನನ್ನ ಜಮೀನಿನ ದಾಖಲೆಗಳನ್ನು ತೆಗೆದುಕೊಂಡರು. ಆ ದಾಖಲೆಗಳು ಪಿ.ಆರ್.ಒ ಕೈ ಸೇರಿದವು. ನಂತರ ಅವರನ್ನು ಕೇಳಿದಾಗ ಜಮೀನಿನ ಖಾತೆ ಮಾಡಿಸುವುದು ಸುಲಭವಲ್ಲ. ಹೀಗಾಗಿ ಇನ್ನಷ್ಟು ಹಣ ನೀಡಬೇಕು ಎಂದರು. ಇದಕ್ಕೆ ಒಪ್ಪದಿದ್ದಾಗ ಅವರು ತಮ್ಮ ದಾಖಲೆಗಳನ್ನು ವಾಪಸ್ ನೀಡದೇ ಸತಾಯಿಸುತ್ತಿದ್ದರು ಅಲ್ಲದೇ ಜಮೀನಿನ ಖಾತಾ ಮಾಡಿಸಿಕೊಡುವುದಾಗಿ ಹೇಳಿ ಅಶ್ವಿನ್ ರಾವ್ ವಿವಿಧ ಹಂತಗಳಲ್ಲಿ 10 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಉದ್ಯಮಿ ಕೃಷ್ಣಮೂರ್ತಿ ಆರೋಪಿಸಿದ್ದಾರೆ.
Advertisement