ಮಂಡ್ಯ: ತಾವೇ ಬೆಳೆದ ಕಬ್ಬು ಬೆಳೆಗೆ ಬೆಂಕಿ ಇಟ್ಟು, ಅದರೊಳಗೇ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ವರು ರೈತ ಮಹಿಳೆಯರು ಯತ್ನಿಸಿರುವ ಘಟನೆ ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ. ಎಚ್.ಮಲ್ಲಿಗೆ ಗ್ರಾಮದ ಸುನಂದಾ, ಜಯಂತಿ, ಕಣ್ಣಮ್ಮ ಹಾಗೂ ಪಾರ್ವ ತಮ್ಮ ಆತ್ಮಹತ್ಯೆಗೆ ಯತ್ನಿಸಿದವರು. ಇನ್ನೂ ಕಾರ್ಯಾರಂಭವಾಗದ ಸಕ್ಕರೆ ಕಾರ್ಖಾನೆಗಳು ಮತ್ತು ಆಲೆಮನೆ ಮಾಲೀಕರು ಕಬ್ಬು ಖರೀದಿಸಲು ಹಿಂದೇಟು ಹಾಕಿದ್ದರಿಂದ ಈ ನಿರ್ಧಾರಕ್ಕೆ ಮುಂದಾಗಿದ್ದರು. ಆದರೆ, ಅಲ್ಲೇ ಇದ್ದ ಕುರಿಗಾಹಿಗಳು ಮಹಿಳೆ ಯರನ್ನು ರಕ್ಷಿಸಿದ್ದಾರೆ.ಸುದ್ದಿ ತಿಳಿದೊಡನೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಕಬ್ಬಿನಗದ್ದೆಯಲ್ಲಿ ಬೆಂಕಿ ನಂದಿಸಿದ್ದಾರೆ. ಸುಮಾರು ಆರು ಎಕರೆಗೂ ಹೆಚ್ಚು ಕಬ್ಬು ಬೆಳೆಗೆ ಹಾನಿ ಯಾಗಿದೆ. ಪಾರ್ವತಮ್ಮ ಅವರಿಗೆ ಸೇರಿದ 2.5 ಎಕರೆ ಕಬ್ಬು, ಸುನಂದಾರಿಗೆ ಸೇರಿದ 1.6 ಎಕರೆ, ಕಣ್ಣಮ್ಮ ಅವರ 1 ಎಕರೆ ಹಾಗೂ ಜಯಂತಿ ಅವರ 1.5 ಎಕರೆ ಕಬ್ಬು ಬೆಳೆ ಸುಟ್ಟು ಕರಕಲಾಗಿದೆ. ಜಯಂತಿ ಎಂಬುವವರು ರು 4 ಲಕ್ಷ ಸಾಲ ಮಾಡಿ ಕಬ್ಬು ಬೆಳೆದಿದ್ದರು. ಲೇವಾ ದೇವಿದಾರರು ಸಾಲ ವಾಪಸ್ ನೀಡುವಂತೆ ಪೀಡಿಸುತ್ತಿದ್ದರು. ಇದೇ ವೇಳೆ, ಕಟಾವಿಗೆ ಬಂದಿದ್ದ ಕಬ್ಬು ಖರೀದಿಸಲು ಆಲೆಮನೆ ಮಾಲೀಕರೂ ನಿರಾಕರಿಸಿದ್ದರಿಂದ ಬೇಸ ತ್ತಿದ್ದರು. ಇನ್ನು, ಸುನಂದಾ ರು. 3 ಲಕ್ಷ ಪಾರ್ವತಮ್ಮ ರು. 5 ಲಕ್ಷ ಹಾಗೂ ಕಣ್ಣಮ್ಮ ರು.1 ಲಕ್ಷ ಸಾಲ ಮಾಡಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ , ಡಿವೈಎಸ್ಪಿ ಉದೇಶ್ ಅವರು ಭೇಟಿ ನೀಡಿ ಪರಿಶೀಲಿಸಿ, ಮಹಿಳೆಯರಿಗೆ ಸಾಂತ್ವನ ಹೇಳಿದರು.`ಕಬ್ಬು ಬೆಳೆಗೆ ಬೆಂಕಿ ಹಚ್ಚಿದ ನಾಲ್ವರು ಮಹಿಳೆಯರು, ನೋಡನೋಡುತ್ತಲೇ ಅದರೊಳಗೆ ನುಗ್ಗಲು ಯತ್ನಿಸುತ್ತಿದ್ದರು. ಕೂಡಲೇ ನಾನು ಮತ್ತು ನನ್ನ ಜತೆಗಿದ್ದವರು ಅವರನ್ನು ಹೊರಗೆ ಎಳೆತಂದೆವು' ಎಂದು ಶೇಖರ್ ಎಂಬಾತ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
Advertisement