ಬೆಂಗಳೂರು: ಉತ್ತರ ಪ್ರದೇಶ ಮಾದರಿಯಲ್ಲಿ ದಲಿತ ಚಳವಳಿಯನ್ನು ರಾಜಕೀಯ ಶಕ್ತಿಯನ್ನಾಗಿ ರೂಪಿಸಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುವುದು ಅನಿವಾರ್ಯ ಎಂದು ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮತಾ ಸೈನಿಕ ದಳ ಬುಧವಾರ ನಗರದಲ್ಲಿ ಏರ್ಪಡಿಸಿದ್ದ `ನಾಲ್ಕು ದಶಕಗಳ ದಲಿತ ಚಳವಳಿ, ಸುಂದರ ನಾಳೆಗಾಗಿ ಒಂದು ಮುನ್ನೋಟ' ಕುರಿತ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿ, ದಲಿತ ಚಳವಳಿ ಉತ್ತುಂಗದಲ್ಲಿದ್ದಾಗ ಅದನ್ನೊಂದು ರಾಜಕೀಯ ಶಕ್ತಿಯಾಗಿ ರೂಪಿಸಬೇಕಿತ್ತು. ಇಂಥ ಪ್ರಯತ್ನ ಮೊದಲಿಗೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಅಲ್ಲಿ ಯಶಸ್ವಿಯೂ ಆಯಿತು. ಆದರೆ, ಇದು ಉಳಿದ ಯಾವುದೇ ರಾಜ್ಯದಲ್ಲೂ ಆಗಿಲ್ಲ. ದಲಿತ ಚಳವಳಿ ಆರಂಭವಾಗಿ 40 ವರ್ಷಗಳೇ ಕಳೆದರೂ ದಲಿತರಿಗೆ ಅಧಿಕಾರ ಸಿಕ್ಕಿಲ್ಲ. ಹೀಗಾಗಿ ನಾವಿನ್ನೂ ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಬೇಡಿಕೊಳ್ಳಬೇಕಿದೆ ಎಂದು ಹನುಮಂತಯ್ಯ ತಿಳಿಸಿದರು.
ದಲಿತರಲ್ಲಿ ಶೇ.20ರಷ್ಟು ಮಂದಿ ಮಾತ್ರ ನಾವು ಸ್ವಾಭಿಮಾನದ ಮಾತುಗಳನ್ನಾಡುತ್ತಿದ್ದು, ಉಳಿದ ಶೇ.80ರಷ್ಟು ದಲಿತರು ಇನ್ನೂ ಬೇಡುವ ಸ್ಥಿತಿಯಲ್ಲಿದ್ದಾರೆ. ಎಲ್ಲದಕ್ಕೂ ಸರ್ಕಾರದ ಮುಂದೆ ಭಿಕ್ಷೆ ಕೇಳುವ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಆದ್ದ ರಿಂದ ದಲಿತರಲ್ಲಿರುವ ಒಳಪಂಗಡಗಳು ಒಂದಾಗಬೇಕು. ಇಲ್ಲದಿದ್ದರೆ ದಲಿತ ಚಳವಳಿಯಾಗಲಿ, ದಲಿತರ ಅಭಿವೃದ್ಧಿಯಾಗಲಿ ನಿರೀಕ್ಷಿತ ರೀತಿಯಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಅವರು ವಿಶ್ಲೇಷಿಸಿದರು.
ಮಹಿಳೆಯರಿಗೆ ಸಾರಥ್ಯ ನೀಡಿ: ದಲಿತ ಚಳವಳಿ ಇತ್ತೀಚೆಗೆ ಸೋಲುವುದಕ್ಕೆ ಮುಖ್ಯ ಕಾರಣ ಸಂಘಟನೆ ಲೋಪ. ಅಂದರೆ ಚಳವಳಿಯಲ್ಲಿ ಮಹಿಳೆಯರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಚಳುವಳಿಯಲ್ಲಿ ಮಹಿಳೆಯರಿಗೆ ಸರಿಯಾದ ಅವಕಾಶ ಮತ್ತು ಮುಂದಾಳತ್ವ ನೀಡುವ ಪ್ರಯತ್ನ ಈ ತನಕವಾಗಿಲ್ಲ. ಆದ್ದರಿಂದ ಇನ್ನು ಮುಂದಾದರೂ ಮಹಿಳೆಯರಿಗೆ ಅವಕಾಶ ನೀಡಿ ದಲಿತ ಚಳವಳಿಯನ್ನು ಸಬಲೀಕರಣಗೊಳಿಸಬೇಕು ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಹೇಳಿದರು.
ದಲಿತ ಸಂಘಟನೆಗಳ ಸಮೀಕರಣದ ತಾತ್ವಿಕ ಚಿಂತನೆ ಬದಲಾಗಬೇಕು. ಇಲ್ಲವಾದರೆ ಒಗ್ಗಟ್ಟು ಇರುವುದಿಲ್ಲ. ಸಂಘಟನೆಯ ಸಮೀಕರಣದಲ್ಲಿ ಆಗಿರುವ ಎಡವಟ್ಟುಗಳಿಂದಲೇ ಸಂಘಟನೆಒಡೆದಿರುವುದು. ಇಲ್ಲಿ ಮೂಡುವ ಒಡಕುಗಳನ್ನು ಸಹಜ ಎಂದು ಪರಿಗಣಿಸಿ ಒಂದಾಗುವ ಪ್ರಯತ್ನ ಮಾಡಬೇಕು. ಹಾಗೆಯೇ ಸಂಘಟನೆಗಳು ಅತಿಯಾಗಿ ಛಿದ್ರವಾದರೆ ಕೊನೆಗೊಂದು ದಿನ ಸಂಘಟನಾಕಾರರಿಗೆ ಅನಾಥ ಪ್ರಜ್ಞೆ ಉಂಟಾಗಿ ಒಂದಾಗುವ ಸಾಧ್ಯತೆಯೂ ಇರುತ್ತದೆ ಎಂದು ಅವರು ವಿಶ್ಲೇಷಿಸಿದರು.
ದಲಿತ ಚಳವಳಿ ಒಂದು ಸಾಮಾಜಿಕ ಸಂಘಟನೆಯಿಂದ ಆಗಿದ್ದು. ಅದನ್ನು ಯಾವುದೇ ಕಾರಣಕ್ಕೂ ರಾಜಕೀಯ ಸಂಘಟನೆಯಾಗಿ ಬದಲಿಸ ಬಾರದಿತ್ತು. ಏಕೆಂದರೆ, ಸಂಘಟನೆಗೆ ರಾಜಕೀಯ ಪ್ರವೇಶಿಸಿದರೆ ಒಗ್ಗಟ್ಟು ನಾಶವಾಗುತ್ತದೆ. ಚಳವಳಿಗೆ ರಾಜಕೀಯ ಮಿಶ್ರಣ ಮಾಡದೆ ಅದನ್ನೊಂದು ರಾಜಕೀಯ ಅಧಿಕಾರಕ್ಕೆ ಬಳಸಬೇಕು. ಅದನ್ನೇ ಕಾನ್ಶಿರಾಮ್ ಅವರು ಮಾಡಿದ್ದು. ಈಗ ನಾವು ಮಾಡಬೇಕು. ನಾವು ಬೇಡುವ ಬದಲು ನೀಡುವಂತಾಗಬೇಕು ಎಂದು ಮಾಲಗತ್ತಿ ಹೇಳಿದರು.
ಸಮತಾ ಸೈನಿಕದಳ ರಾಜ್ಯಾಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ, ತೆಲಂಗಾಣದ ಪ್ರತಿನಿಧಿ ಶಾಂತಕುಮಾರಿ, ಆಂಧ್ರ ದಲಿತ ಸಂರ್ಘರ್ಷ ಸಮಿತಿಯ ನಲ್ಲರಾಧಾಕೃಷ್ಣ, ತಮಿಳುನಾಡಿನ ಮಹೇಶ್ವರಿ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್, ಗಾಯಕ ಆನಂದ್ ಮಾಲೂರು, ಕವಿ ಗೊಲ್ಲಹಳ್ಳಿ ಶಿವಪ್ರಸಾದ್, ದಲಿತ ಚಳವಳಿಯ ಮುಖಂಡರಾದ ವೈ.ಎಸ್.ದೇವೂರ್, ಇಂದಿರಾ ಕೃಷ್ಣಪ್ಪ, ವೈ ಮರಿಸ್ವಾಮಿ ಹಾಜರಿದ್ದರು
Advertisement