
ಬೆಂಗಳೂರು: ದೇವಸ್ಥಾನಗಳಲ್ಲಿ ನಡೆಯುತ್ತಿರುವ ಭಕ್ತರ ಶೋಷಣೆ ತಪ್ಪಿಸಲು ರಾಜ್ಯ ಸರ್ಕಾರ 11 ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಆನ್ಲೈನ್ ಸೇವೆ ಆರಂಭಿಸಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಮತ್ತು ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಕಲ್ಪಿಸಲಾಗಿರುವ ದೇಗುಲಗಳ ಆನ್ಲೈನ್ ಸೇವೆಯನ್ನು ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ ಗುರುವಾರ ಉದ್ಘಾಟಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರು.1 ಕೋಟಿಗೂ ಹೆಚ್ಚಿನ ಆದಾಯ ಇರುವ ರಾಜ್ಯದ 11 ದೇವಸ್ಥಾನಗಳಲ್ಲಿ ಭಕ್ತರಿಗೆ ಸುಲಭ ದರ್ಶನಕ್ಕಾಗಿ ಆನ್ಲೈನ್ ಸೇವೆ ಆರಂಭಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿನಂತಿಸಿದರು. ಬೆಂಗಳೂರು ಒನ್ ವೆಬ್ಸೈಟ್ನಿಂದ ಬುಕ್ಕಿಂಗ್ ಮಾಡಬೇಕು.
ಕೊಲ್ಲೂರು ಮೂಕಾಂಬಿಕಾ, ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಹದೇಶ್ವರ ಬೆಟ್ಟ, ಮೈಸೂರು ಚಾಮುಂಡೇಶ್ವರಿ, ನಂಜನಗೂಡು ಶ್ರೀಕಂಠೇಶ್ವರ, ಹುಲಿಗೇಮ್ಮ ದೇವಿ, ರೇಣುಕಾಯಲ್ಲಮ್ಮ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ, ಅಳೇವೂರು ಶ್ರೀ ದುರ್ಗಾ ಪರಮೇಶ್ವರಿ ಹಾಗೂ ಬೆಂಗಳೂರಿನ ಬನಶಂಕರಿ ದೇವಸ್ಥಾನಗಳಲ್ಲಿ ಲಭ್ಯ ಇರುತ್ತದೆ. ತಿರುಪತಿಯಲ್ಲಿ ಮಾತ್ರ ದೇವರ ದರ್ಶನಕ್ಕೆ ಬದಲಾಗಿ ಕರ್ನಾಟಕ ರಾಜ್ಯದ ಛತ್ರಗಳಲ್ಲಿ ತಂಗುವುದಕ್ಕೆ ಕಲ್ಪಿಸಲಾಗಿದೆ. ದರ್ಶನಕ್ಕೆ ತಾವೇ ವ್ಯವಸ್ಥೆ ಮಾಡಿಸಿಕೊಳ್ಳಬೇಕು ಎಂದರು.
Advertisement