ಮೈಸೂರು: ಬಜೆಟ್ನಲ್ಲಿ ಘೋಷಿಸಲಾಗಿರುವ ಪಶುಭಾಗ್ಯ ಯೋಜನೆಯು ಇನ್ನೊಂದು ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಹರ್ಷ ಗುಪ್ತ ಅವರು ಹೇಳಿದ್ದಾರೆ.
ಈ ಯೋಜನೆ ಸದ್ಯದಲ್ಲೇ ಸಚಿವ ಸಂಪುಟದ ಮುಂದೆ ಬರಲಿದ್ದು, ಇನ್ನೊಂದು ತಿಂಗಳಲ್ಲಿ ಜಾರಿಯಾಗುವ ನಿರೀಕ್ಷೆ ಇದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಶುಭಾಗ್ಯ ಯೋಜನೆಗಾಗಿ ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಲ್ಲಿ 65 ಕೋಟಿ, ಸಹಕಾರ ಇಲಾಖೆಯಿಂದ 25 ಕೋಟಿ, ಕೆ.ಎಂಎಫ್ ಹಾಗೂ ಹಾಲು ಒಕ್ಕೂಟದಿಂದ 15 ಕೋಟಿ ದೊರೆಯಲಿದೆ. ಇದರೊಂದಿಗೆ ಇಲಾಖೆಯೂ 40ರಿಂದ 50 ಕೋಟಿ ವಿನಿಯೋಗಿಸಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇದರಿಂದ ಎಲ್ಲ ಸಣ್ಣ ಹಾಗೂ ಮಧ್ಯಮ ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆಗೆ ಯಾವುದೇ ಗುರಿ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪಶುಭಾಗ್ಯ ಯೋಜನೆಯಲ್ಲಿ ಪಶು ಖರೀದಿ, ಪಶು ಸಾಕಾಣಿಕೆ ಹಾಗೂ ಪಶುಗಳಿಗೆ ವಿಮೆ-ಹೀಗೆ ಮೂರು ಹಂತದಲ್ಲಿ ರೈತರಿಗೆ ನೆರವು ನೀಡಲಾಗುವುದು. ರೈತ ಮೊದಲ ಹಂತದಲ್ಲಿ ಬ್ಯಾಂಕ್ಗಳಿಂದ 1.20 ಲಕ್ಷದವರೆಗೆ ಸಾಲ ಪಡೆದು ಜಾನುವಾರುಗಳನ್ನು ಖರೀದಿಸಬಹುದು. ಹೀಗೆ ಖರೀದಿಸುವ ರೈತರಿಗೆ ರಾಜ್ಯ ಸರ್ಕಾರವು ಸಾಮಾನ್ಯ ವರ್ಗದವರಿಗೆ ಶೇ.25ರಷ್ಟು ಹಾಗೂ ಎಸ್ಸಿ, ಎಸ್ಟಿಗೆ ಶೇ.50ರಷ್ಟು ಸಹಾಯಧನವನ್ನು ಬ್ಯಾಂಕ್ಗೆ ಪಾವತಿಸಲಿದೆ.
2 ಹಸು, 10ರಿಂದ 15 ಕುರಿ ಅಥವಾ ಮೇಕೆ, ಕೋಳಿ ಹೀಗೆ ಯಾವ ಪಶುವನ್ನಾದರೂ ಖರೀದಿಸಲು ಅವಕಾಶವಿದೆ. ಎಂದು ಹರ್ಷ ಗುಪ್ತ ಅವರು ಮಾಹಿತಿ ನೀಡಿದರು.
ಎರಡನೇ ಹಂತದಲ್ಲಿ ಪಶು ಸಾಕಣೆ ವೆಚ್ಚಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ 5 ಸಾವಿರ ರುಪಾಯಿಯ ವರೆಗೆ ಸಹಕಾರ ಇಲಾಖೆಯಲ್ಲಿ ನೋಂದಣಿಯಾಗಿರುವ ಸಹಕಾರ ಸಂಘಗಳಿಂದ ಸಾಲ ನೀಡಲಾಗುವುದು. 3ನೇ ಹಂತದಲ್ಲಿ 1ರಿಂದ 2 ಲಕ್ಷದವರೆಗೆ ಜಾನುವಾರುಗಳಿಗೆ ವಿಮೆ ಮಾಡಿಸಲಾಗುವುದು ಎಂದರು.
Advertisement