ಇಂದಿನಿಂದ ರಸ್ತೆ ದುರಸ್ತಿ: ಸಚಿವ ರಾಮಲಿಂಗರೆಡ್ಡಿ
ಬೆಂಗಳೂರು: ನಗರದಲ್ಲಿ ರಸ್ತೆಗಳು ಹದಗೆಟ್ಟಿರುವುದರಿಂದ ಜೂನ್ 20ರಿಂದ ನಗರದ ಪ್ರಮುಖ ರಸ್ತೆಗಳ ಡಾಂಬರೀಕರಣ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.
ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿಗಷ್ಟೆ ರು. 300 ಕೋಟಿ ಬಿಡುಗಡೆ ರಸ್ತೆ ದುರಸ್ತಿಯಾಗುವಂತೆ ಮಾಡಿದ್ದರು. ಈಗ ಮತ್ತೆ ರು.460 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳ ಡಾಂಬರೀಕರಣ ಆರಂಬಿsಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಕಸ ಸಮಸ್ಯೆ ವಿಪರೀತಕ್ಕೆ ಹೋಗಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಸ ಸಮಸ್ಯೆ ನಿವಾರಣೆಗೆ ವಿಶೇಷ ಆದ್ಯತೆ ನೀಡಿ, ಮಂಡೂರಿಗೆ ಕಸ ಸಾಗಣೆಯಾಗದಂತೆ ಮಾಡಲಾಯಿತು. ಅಷ್ಟೇ ಅಲ್ಲ. ಈಗಾಗಲೇ ಮಂಡೂರಿನಲ್ಲಿ ಕಸದ ರಾಶಿ ಸಮಸ್ಯೆ ಪರಿಹಾರಕ್ಕೂ ಸರ್ಕಾರ ಕ್ರಮಕೈಗೊಂಡಿದೆ ಎಂದರು. ಮಂಡೂರಿನಲ್ಲಿ ಸದ್ಯ 20ಲಕ್ಷ ಟನ್ ಕಸವಿದ್ದು, ಅದನ್ನು ಸಂಸ್ಕರಣೆ ಮಾಡಲು ರು. 90ಕೋಟಿ ವೆಚ್ಚದಲ್ಲಿ 4 ಕಸ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
ಈ ಘಟಕಗಳು ಸದ್ಯದಲ್ಲೇ ಕೆಲಸ ಆರಂಭಿಸಲಿದ್ದು, ಮಂಡೂರಿನಲ್ಲಿ ಕಸ ತೊಂದರೆ ನಿವಾರಣೆಯಾಗಲಿದೆ ಎಂದು ವಿವರಿಸಿದರು. ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತವಿದ್ದಾಗ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ಒದಗಿಸಿತ್ತು. ಆದರೆ ಬಿಬಿಎಂಪಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ಅಷ್ಟೇ ಅಲ್ಲ. ಹಿಂದಿನ ಆಡಳಿತ ಬಿಬಿಎಂಪಿಯನ್ನು ರು.9000 ಕೋಟಿ ಸಾಲದಲ್ಲಿ ನೂಕಿ ಹೋಗಿದೆ. ಜತೆಗೆ 2ವರ್ಷಗಳಿಂದ ಗುತ್ತಿದಾರ ಬಾಕಿ ಮತ್ತು ಕಸ ವಿಲೇವಾರಿ ಬಾಕಿಯನ್ನು ಉಳಿಸಿದೆ. ಹೀಗಾಗಿ ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ಇಡೀ ನಗರಕ್ಕೆ ಒಳಚರಂಡಿ ಮತ್ತು ಕುಡಿಯುವ ನೀರು ಒದಗಿಸಲು ರು. 5000ಕೋಟಿ ವೆಚ್ಚ ಮಾಡಲು ಸರ್ಕಾರ ಮುಂದಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ