ಬೆಂಗಳೂರು: ಭ್ರಷ್ಟರನ್ನು ಮಟ್ಟಹಾಕಲು ಹುಟ್ಟಿರುವ ಸಂಸ್ಥೆ ಲೋಕಾಯುಕ್ತದಲ್ಲೇ ಭ್ರಷ್ಟಾಚಾರ ಆರೋಪಗಳು ಕೇಳಿಬರುತ್ತಿವೆ. ಇದನ್ನು ಮಟ್ಟಹಾಕಲು ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಮುಂದಾಗಿದ್ದು ಪ್ರತ್ಯೇಕ ಗುಪ್ತಚರ ದಳ ರಚನೆ ಮಾಡಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಭೂ ಕಬಳಿಕೆ ಹೋರಾಟ ಸಮಿತಿ ಅಧ್ಯಕ್ಷ ಎ.ಟಿ ರಾಮಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿರುವ ಕೆಲವು ಅಪಾರ್ಟ್ ಮೆಂಟ್ ಗಳು ಭೂ ಒತ್ತುವರಿ ಮಾಡಿದ್ದು ಈ ಎಲ್ಲವುಗಳ ಬಗ್ಗೆ ಮಾಹಿತಿ ನೀಡಲು ಲೋಕಾಯುಕ್ತರ ಬಳಿ ಹೋಗಿದ್ದಾಗ ಅವರು ಈ ವಿಷಯ ತಿಳಿಸಿದರು ಎಂದು ರಾಮಸ್ವಾಮಿ ಹೇಳಿದ್ದಾರೆ. ಲೋಕಾಯುಕ್ತ ಸಂಸ್ಥೆ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ. ಆದರೆ ಇಲ್ಲೇ ಭ್ರಷ್ಟತೆಯಾ ಆರೋಪಗಳು ಕೇಳಿಬರುತ್ತಿವೆ. ಜನರಲ್ಲಿರುವ ನಂಬಿಕೆ ಉಳಿಸಿಕೊಂಡು ಜನರಿಗೆ ನ್ಯಾಯ ಒದಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ಪ್ರತ್ಯೇಕ ಗುಪ್ತಚರ ದಳ ರಚನೆ ಮಾಡಬೇಕು ಎಂದು ಲೋಕಾಯುಕ್ತರು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.
ಶಾಂತಿನಗರ ಸೊಸೈಟಿಯವರು 3 ಸಾವಿರ ಕೋಟಿ ರೂ ಮೌಲ್ಯದ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಪೂರ್ವಾಂಕರ, ಖೋಡೆ ಸಂಸ್ಥೆಯವರು ಭೂ ಒತ್ತುವರಿ ಮಾಡಿಕೊಂಡಿರುವುದರ ಬಗ್ಗೆ ಲೋಕಾಯುಕ್ತಕ್ಕೆ ಮನವಿ ಮಾಡಲಾಗಿತ್ತು ದೂರಿನ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ ಲೋಕಾಯುಕ್ತರೊಂದಿಗಿನ ಭೇಟಿ ವೇಳೆ ಚರ್ಚೆ ನಡೆಸಲಾಯಿತು ಎಂದು ರಾಮಸ್ವಾಮಿ ತಿಳಿಸಿದ್ದಾರೆ.
Advertisement