ಬೆಂಗಳೂರು: ಗ್ರಾಮ ವಿಕಾಸ ಯೋಜನೆಯನ್ನು ಅಕ್ಟೋಬರ್ 2 ರಿಂದ ಆರಂಭಿಸಲು ನಿರ್ಧರಿಸಲಾಗಿದ್ದು, 2016 ರ ಅಕ್ಟೋಬರ್ 2 ರೊಳಗೆ ಎಲ್ಲಾ ಕಾಮಗಾರಿಗಳನ್ನು ಮುಕ್ತಾಯಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳು ಸಕಾಲದಲ್ಲಿ ಪೂರ್ಣಗೊಳ್ಲದೇ ಇರುವ ಕಾರಣಕ್ಕೆ ಗ್ರಾಮ ವಿಕಾಸ ಯೋಜನೆಗೆ ಪಂಚಾಯಿತಿಗಳನ್ನು ಆಯ್ಕೆ ಮಾಡುವುದಕ್ಕೆ ಕೊಂಚ ವಿಳಂಬವಾಗಿತ್ತು. ಮುಂದಿನ ಒಂದು ವರ್ಷದಲ್ಲಿ ಈ ಯೋಜನೆ ಅನ್ವಯ ಆರಂಭಿಸುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ತಲಾ 7 ,500 ರೂ ವೆಚ್ಚ: ರಾಜ್ಯದ 189 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತದೆ. ಪ್ರತಿ ಕ್ಷೇತ್ರದಲ್ಲಿ 5 ಪಂಚಾಯಿತಿಗಳನ್ನು ಆಯ್ದುಕೊಳ್ಳಲಾಗುತ್ತದೆ. ಹಿಂದುಳಿಯುವಿಕೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಇತ್ಯಾದಿ ಮಾನದಂಡಗಳ ಆಧಾರದ ಮೇಲೆ ಶಾಸಕರ ಅಧ್ಯಕ್ಷತೆಯಲ್ಲಿನ ಸಮಿತಿ ಗ್ರಾಮಗಳನ್ನು ಆಯ್ಕೆ ಮಾಡುತ್ತದೆ. ಒಂದು ಗ್ರಾಮದಲ್ಲಿ ಗರಿಷ್ಠ 5000 ವ್ಯಕ್ತಿಗಳಿಗೆ ತಲಾವಾರು 7 , 500 ರೂ ಅನುದಾನ ವೆಚ್ಚ ಮಾಡಲಾಗುತ್ತದೆ. 75 ಲಕ್ಷದವರೆಗೆ ಯೋಜನಾ ಗಾತ್ರವನ್ನು ನಿಗದಿ ಮಾಡಲಾಗುವುದು ಎಂದು ಹೇಳಿದರು. ಒಟ್ಟು 21 ಕಾರ್ಯಕ್ರಮಗಳನ್ನು ಈ ಯೋಜನೆ ಅನ್ವಯ ಜಾರಿಗೆ ತರಲಾಗುವುದು. ಶೇ.50 ರಷ್ಟು ಅನುದಾನವನ್ನು ರಸ್ತೆ ಚರಂಡಿ, ಪಂಚಾಯಿತಿ ಹೊರಗಟ್ಟೆ, ಪರಿಸರ ಸಂರಕ್ಷಣೆಗೆ ಬಳಸಲಾಗುತ್ತದೆ ಎಂದರು.
Advertisement