ಬೆಂಗಳೂರು: ಕರ್ನಾಟಕ ಸಂಸ್ಕೃತ ವಿವಿಯ ಹಿಂದಿನ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಅಧಿಕಾರಾವಧಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರು ತನಿಖಾ ಆಯೋಗ ರಚಿಸಿಲ್ಲ ಎಂದು ಅಖಿಲ ಕರ್ನಾಟಕ ಸಂಸ್ಕೃತ ವಿಚಾರ ವೇದಿಕೆ ಅಧ್ಯಕ್ಷ, ಕೊಳದ ಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿ ಆರೋಪಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಸಂಸ್ಕೃತ ವಿವಿ ಉಪ ಕುಲಸಚಿವ ಆಗಿರುವ ಪ್ರಕಾಶ್ ಆರ್, ಪಾಗೋಜಿ, ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ವಯೋಮಿತಿ ಮೀರಿದ್ದರೂ ಸುಳ್ಳು ಪ್ರಮಾಣ ಪತ್ರ ನೀಡಿ ಅಕ್ರಮವಾಗಿ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ಪ್ರಭಾರಿ ಕುಲಪತಿ ಶ್ರೀನಿವಾಸ ವರಖೇಡಿ ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಮೂರು ತಿಂಗಳೊಳಗೆ ಹೊಸ ಕುಲಪತಿಯನ್ನು ಸಂಸ್ಕೃತ ವಿವಿಗೆ ನೇಮಿಸುವಂತೆ 2014ರ ಸೆಪ್ಟೆಂಬರ್ನಲ್ಲೇ ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಇನ್ನೂ ನೇಮಕ ಮಾಡಿಲ್ಲ. ಶ್ರೀನಿವಾಸ ವರಖೇಡಿ ಅವರೇ ಇನ್ನೂ ಪ್ರಭಾರಿಯಾಗಿ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಇವರನ್ನು ಈ ಹುದ್ದೆಯಲ್ಲಿ ಮುಂದುವರಿಸುವುದು ಉಚಿತವಲ್ಲ. ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement