ಮದ್ವೆ ಆಗ್ದೇ ಹುಚ್ಚು ಬಿಡಲ್ಲ, ಹುಚ್ಚು ಬಿಡ್ದೆ ಮದ್ವೆ ಆಗಲ್ಲ!
ವಿಧಾನಪರಿಷತ್ತು: ಸರ್ಕಾರಿ ಆಸ್ಪತ್ರೆಗಳಿಗೆ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಬರಬೇಕೆಂದರೆ ಹೆಚ್ಚಿನ ಸಿಬ್ಬಂದಿ- ವೈದ್ಯರನ್ನು ನೇಮಿಸಬೇಕೆಂಬುದು ಸದಸ್ಯರ ವಾದವಾದರೆ, ಆಸ್ಪತ್ರೆಗೆ ಹೆಚ್ಚು ಹೆಚ್ಚು ಜನ ಬಂದಾಗ ನಾವು ಹೆಚ್ಚಿನ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸುತ್ತೇವೆಂಬುದು ಆರೋಗ್ಯಸಚಿವರ ವಾದ!
ಇಂಥದ್ದೊಂದು ವಿಚಿತ್ರ ಚರ್ಚೆ ಮೇಲ್ಮನೆಯ ಪ್ರಶ್ನೋತ್ತರ ಅವಧಿಯಲ್ಲಿ ನಡೆಯಿತು. ಆಡಳಿತ ಪಕ್ಷಕ್ಕೇ ಸೇರಿದ ಸದಸ್ಯೆ ಎ.ವಿ.ಗಾಯಿತ್ರಿ ಶಾಂತೇಗೌಡ, ಚಿಕ್ಕಮಗಳೂರು ಜಿಲ್ಲೆಯ ಆಯುಷ್ ಆಸ್ಪತ್ರೆಗಳ ಸಿಬ್ಬಂದಿ ವೈದ್ಯರ ಕೊರತೆ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಖಾದರ್, `ಶುಶ್ರೂಷಕರ ಹುದ್ದೆ ತುಂಬುವ ಉದ್ದೇಶದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಲು ಕೆಪಿಎಸ್ಸಿಗೆಕೋರಲಾಗಿದೆ' ಎಂದರು.
ಇದಕ್ಕೆ ತೃಪ್ತರಾಗದ ಗಾಯಿತ್ರಿ ಶಾಂತೇಗೊಡ ಸಿಟ್ಟಿನಿಂದಲೇ, ಸೂಕ್ತ ಸಿಬ್ಬಂದಿ-ವೈದ್ಯರನ್ನು ನೇಮಿಸದೇ ಹೋದರೆ ಜನ ಹೇಗೆ ಬರಲು ಸಾಧ್ಯ. ಮೊದಲು ನೇಮಕಾತಿ ತುರ್ತಾಗಿ ಮಾಡಿ' ಎಂದರು. ಈ ವೇಳೆ ಸಚಿವರು, ಇರುವ ಸಿಬ್ಬಂದಿಯ ಕಾರ್ಯಭಾರ ಒತ್ತಡ ಗಮನಿಸಿ ನೇಮಕ ಮಾಡಲಾಗುತ್ತದೆ. ಸದ್ಯದ ಮಟ್ಟಿಗೆ ಅಷ್ಟಾಗಿ ಒತ್ತಡ ಇಲ್ಲ ಎಂದು ಸಮರ್ಥಿಸಿಕೊಂಡರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮದ್ವೆ ಆಗದೇ ಹುಚ್ಚು ಬಿಡಲ್ಲ, ಹುಚ್ಚು ಬಿಡ್ದೆ ಮದುವೆ ಆಗಲ್ಲ' ಎಂಬಂಥ ಪರಿಸ್ಥಿತಿ ಇದು ಎಂದು ಕಿಚಾಯಿಸಿದರು. ಕೊನೆಗೂ ಸಚಿವರಿಂದ ಸೂಕ್ತ ಉತ್ತರ ಬಾರದೇ ಇದ್ದಿದ್ದರಿಂದ ಬೇಸರದಿಂದಲೇ ಗಾಯಿತ್ರಿ ತಮ್ಮ ಆಸನದಲ್ಲಿ ಕುಳಿತರು.
ವಿಧೇಯಕಕ್ಕೆ ಅಂಗೀಕಾರ
ವಿಧಾನಸಭೆ: ಜಿಕೆವಿಕೆಯ 125 ಎಕರೆ ಭೂ ಪ್ರದೇಶವನ್ನು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸುವ ಉದ್ದೇಶಕ್ಕಾಗಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ವಿಧೇಯಕವನ್ನು ಮಂಡಿಸಿದರು. ಚರ್ಚೆ ನಡೆಸದೇ ಸದನ ಒಪ್ಪಿಗೆ ನೀಡಿದೆ
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ