
ವಿಧಾನಸಭೆ: ರಾಜ್ಯ ಸರ್ಕಾರ `ಮದ್ಯಭಾಗ್ಯ' ಯೋಜನೆಯನ್ನು ಜಾರಿಗೆ ತಂದರೆ ಸಿದ್ದರಾಮಯ್ಯನವರು ಭವಿಷ್ಯದಲ್ಲಿ ಕಾಂಗ್ರೆಸ್ಗೆ ಇನ್ನಷ್ಟು ಮತ ಗಳಿಸಿಕೊಡಲು ಸಾಧ್ಯ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಟಾರ್ಗೆಟ್ ನಿಗದಿ ವಿಚಾರದಲ್ಲಿ ಸರ್ಕಾರ ಮದ್ಯ ಮಾರಾಟಗಾರರಿಗೆ ಹಿಂಸೆ ನೀಡುತ್ತಿದೆ. ಈ ಕಾಟವನ್ನು ತಾಳಲಾರದೇ ಅಬಕಾರಿ ಖಾತೆ ನಿರ್ವಹಣೆ ಮಾಡುತ್ತಿದ್ದ ಸತೀಶ್ ಜಾರಕಿ ಹೊಳಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದರು. ದೇಶವ್ಯಾಪಿ ಕಾಂಗ್ರೆಸ್ ಕಷ್ಟದಲ್ಲಿ ಇರುವುದರಿಂದ ನೀವು ಅಧಿಕಾರಕ್ಕೆ ಬಂದ ಆರಂಭದಲ್ಲಿ ಪ್ರಸ್ತಾಪಿಸಿದ್ದ ಅಗ್ಗದ ಮದ್ಯ ಅಥವಾ ಮದ್ಯಭಾಗ್ಯ ಯೋಜನೆಯನ್ನು ಜಾರಿಗೆ ತಂದರೆ ಜನ ಒಂದಿಷ್ಟು ಮತ ನೀಡಬಹುದು ಎಂದು ಕಟಕಿಯಾಡಿದರು.
ಸಿದ್ದರಾಮಯ್ಯ ಅವರು ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕಾಂಗ್ರೆಸ್ ಹೈಕಮಾಂಡ್ ಒಪ್ಪಿದ್ದರೂ ದೇವೇಗೌಡರು, ಜಾತ್ಯತೀತ ಜನತಾದಳಕ್ಕೆ ಮುಖ್ಯಮಂತ್ರಿ ಪಟ್ಟ ಬೇಡ ಎನ್ನುವ ಮೂಲಕ ನನಗೆ ಲಭಿಸಬೇಕಿದ್ದ ಅವಕಾಶ ತಪ್ಪಿಸಿದರು ಎಂದು ಆರೋಪಿಸಿದ್ದಾರೆ. ಅವರು ಹಳೆಕತೆಯನ್ನು ಮತ್ತೆ ಪ್ರಸ್ತಾಪಿಸಿರುವುದರಿಂದ ನಾನು ಉತ್ತರ ಹೇಳಲು ಬಯಸುತ್ತೇನೆ. ಬಜೆಟ್ ಚರ್ಚೆಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ನೀವು ಪ್ರತಿಪಾದಿಸಬಹುದು. ಆದರೆ ಸಿದ್ದರಾಮಯ್ಯನವರು ಪ್ರತಿಪಕ್ಷ ನಾಯಕರಾಗಿದ್ದಾಗ 2007-08ರಲ್ಲಿ ಬಜೆಟ್ ಭಾಷಣ ಸಂದರ್ಭದಲ್ಲಿ 2 ಗಂಟೆ ರಾಜಕೀಯ ಭಾಷಣ ಮಾಡಿದ್ದಾರೆ. ನಾನು ಅವರದ್ದೇ ಮಾರ್ಗದಲ್ಲಿ ಸಾಗುತ್ತಿದ್ದೇನೆ ಎಂದರು.
ಅಹ್ಮದ್ ಪಟೇಲ್ ಕೇಳಿ
ದೇವೇಗೌಡರು ತಾವು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದರು ಎಂದು ಹೇಳುವ ಸಿದ್ದರಾಮಯ್ಯನವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಬಳಿ ಒಮ್ಮೆ ವಿಚಾರಿಸಲಿ. ಆಗ ಸಿಎಂ ಪಟ್ಟ ತಪ್ಪಿಸಿದ್ದು ಯಾರೆಂಬುದು ಅರ್ಥ ಆಗುತ್ತದೆ ಎಂದು ವ್ಯಂಗ್ಯವಾಗಿದರು.
Advertisement