ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಮಂಜೂರಾಗಿದ್ದ ಸೈಟ್ ಅಳತೆ ಮಾಡಲು ರು.7 ಲಕ್ಷ ಲಂಚ ಪಡೆದ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಹಾಗೂ ಕಿರಿಯ ಎಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆರ್ಟಿ ನಗರದಲ್ಲಿರುವ ಬಿಡಿಎ ಉತ್ತರ ಕಚೇರಿ ಎಇಇ ರುದ್ರೇಗೌಡರ್ ಹಾಗೂ ಕಿರಿಯ ಎಂಜಿನಿಯರ್ ಅದನಿ ಬಲೆಗೆ ಬಿದ್ದವರು. ಹೆಸರು ಹೇಳಲಿಚ್ಛಿಸದ ದೂರುದಾರರೊಬ್ಬರಿಗೆ ಸೇರಿದ ಬಾಣಸವಾಡಿ ಸಮೀಪದಲ್ಲಿದ್ದ 5 ಗುಂಟೆ ಜಮೀನನ್ನು ಬಿಡಿಎ ವಶಪಡಿಸಿಕೊಂಡಿತ್ತು. ಅದರ ಬದಲಿಗೆ ಎಚ್ಬಿಆರ್ 1ನೇ ಹಂತದಲ್ಲಿ 60/40 ಅಳತೆಯ ಸೈಟ್ ಮಂಜೂರು ಮಾಡಿತ್ತು. ನಿಯಮದಂತೆ ಎಂಜಿನಿಯರ್ಗಳು ಮಂಜೂರು ಮಾಡಲಾಗಿರುವ ಸೈಟ್ ಅಳತೆ ಮಾಡಿ ಈ ಬಗ್ಗೆ ಬಿಡಿಎ ಆಯುಕ್ತರಿಗೆ ವರದಿ ಸಲ್ಲಿಸಬೇಕು. ಆದರೆ, ಈ ಪ್ರಕ್ರಿಯೆ ಪೂರ್ಣಗೊಳಿಸಲು ಎಂಜಿನಿಯರ್ಗಳು ರು.8 ಲಕ್ಷ ಲಂಚ ಕೇಳಿದ್ದರು.
ಲಂಚದ ಹಣ ತಮಗೆ ಮಾತ್ರವಲ್ಲದೇ ಬೇರೆ ಬೇರೆ ಅಧಿಕಾರಿಗಳಿಗೂ ಹಂಚಬೇಕಾಗುತ್ತದೆ. ತಾನು ಬರೀ ರು.4 ಲಕ್ಷ ಮಾತ್ರ ಪಡೆಯುತ್ತೇನೆ. ಉಳಿದ ನಾಲ್ಕು ಲಕ್ಷ ಹಣವನ್ನು ಅಳತೆ ಮಾಡುವ ಹಲವು ಸಹೋದ್ಯೋಗಿಗಳಿಗೆ ನೀಡುತ್ತೇನೆ ಎಂದು ಎಇಇ ರುದ್ರೇಗೌಡರ್ ದೂರುದಾರರಿಗೆ ಹೇಳಿದ್ದ. ಲಂಚ ನೀಡಲು ಇಚ್ಚಿಸದ ದೂರುದಾರರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ಸಂಘಟಿಸಲಾಗಿತ್ತು. ಮೂವರು ಆರೋಪಿಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು
Advertisement