ಬೆಂಗಳೂರು: ಮಹಿಳೆ ಇಂದು ಪುರುಷನಿಗೆ ಸರಿಸಮಾನಳಾಗಿ ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದರೂ ಸಹ ಅವಳಿಗೆ ಸೂಕ್ತ ಸಮಾನತೆ ಸಿಗುತ್ತಿಲ್ಲ ಎಂದು ನಟಿ ಭವ್ಯಾ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2015 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆ ಹೊಸ್ತಿಲು ದಾಟಲು ಬಿಡುತ್ತಿರಲಿಲ್ಲ. ಆದರೆ, ಇಂದು ಆಕೆ ಯಾರಿಗೇನು ಕಡಿಮೆ ಇಲ್ಲ ಎಂಬಂತೆ ಎಲ್ಲಾ ಕ್ಷೇತ್ರದ್ಲಲೂ ಗುರುತಿಸಿಕೊಂಡಿದ್ದಾಳೆ. ಆದರೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಆಕೆಗೆ ಹೆಚ್ಚು ಸ್ಥಾನಮಾನ ಹಾಗೂ ಸಮಾನತೆ ಸಿಗುತ್ತಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರಣ್ಯ ಇಲಾಖೆ ಸಚಿವ ರಮಾನಾಥ ರೈ ಮಾತನಾಡಿ, ಪ್ರತಿಯೊಬ್ಬರೂ ಅಕ್ಷರಜ್ಞಾನಿಗಳಾದಾಗ ಮಾತ್ರ ಶೋಷಣೆಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಮಹಿಳೆಯರಿಗೆ ಮೀಸಲು ನೀಡಿದ ಕಾರಣ ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ದೊರೆಯಿತು. ಆದರೆ ಸಂಸತಿನಲ್ಲಿ ಇನ್ನೂ ಅಗತ್ಯ ಮೀಸಲಾತಿ ಸಿಕ್ಕಿಲ್ಲ. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಂದಾಗಿ ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲೀಕರಣಗೊಂಡಿದ್ದಾರೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಂತಿ ದೇಸಾಯಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲಲಿತಾ ಶಾಸ್ತ್ರಿ ಮತ್ತು ಡಿ.ಎಸ್. ಅನುಪಮಾ, ಮಲ್ಲಮ್ಮ ಶಿವಾನಂದ ಅವರನ್ನು ಸನ್ಮಾನಿಸಲಾಯಿತು. ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಸುಶೀಲಮ್ಮ, ಸೌಹಾರ್ದ ಕೌಟುಂಬಿಕ ಸಲಹಾ ಕೇಂದ್ರದ ಹಿರಿಯ ಸಲಹೆಗಾರ್ತಿ ಲಲಿತಾ ಶಾಸ್ತ್ರಿ ಮಂಡಲಿಯ ಅಧ್ಯಕ್ಷೆ ದಿವ್ಯ ಪ್ರಭ ಗೌಡ ಇದ್ದರು.
Advertisement