ಬೆಂಗಳೂರು: ಬಸವಣ್ಣ ಮೂರ್ತಿ ಪೂಜೆ ವಿರೋಧಿಸಿದ್ರು, ಅದೇ ರೀತಿ ಪ್ರವಾದಿ ಮೊಹಮ್ಮದ್ ಕೂಡ ಮೂರ್ತಿ ಪೂಜೆಯನ್ನು ವಿರೋಧಿಸಿದ್ದರು ಹೀಗಾಗಿ ಇಸ್ಲಾಂಗೂ ಹಾಗೂ ಬಸವ ತತ್ವಕ್ಕೂ ಪರಸ್ಪರ ಸಾಮ್ಯತೆ ಇದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ,(ಕರ್ನಾಟಕ) ವತಿಯಿಂದ ಹರೀಶ್ ಹರ್ಸೂರು ಅವರು ಬರೆದಿರುವ "ಬಸವ ತತ್ವ ಮತ್ತು ಇಸ್ಲಾಂ' ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿಯೊಂದು ಧರ್ಮವೂ ನಾವು ಶ್ರೇಷ್ಠ ಎಂಬ ಧೋರಣೆ ಹೊಂದಿದೆ. ಅನ್ಯಧರ್ಮಗಳನ್ನು ಕೀಳು ಮನೋಭಾವನೆಯಿಂದ ಕಾಣುತ್ತಿವೆ. ಆದರೆ, ಎಲ್ಲಾ ಧರ್ಮಗಳು ಒಂದೇ ಅರ್ಥದಿಂದ ಕೂಡಿದೆ. ಅದು ಒಂದೇ ಸಂದೇಶವನ್ನೇ ಸಾರುತ್ತದೆ.
ಕೇವಲ ಭಾಷೆಯಲ್ಲಿ ವ್ಯತ್ಯಾಸವಿದೆ ಹೊರತು ಅರ್ಥದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.
ಗಾಂಧೀಜಿ ಅವರು ಹಿಂದೂ ಧರ್ಮದ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರು. ಆದರೆ, ಎಂದಿಗೂ ಮಂದಿರಗಳಿಗೆ ಹೋಗಿ ಪೂಜಿಸಿದವರಲ್ಲ. ಅಲ್ಲದೇ, ಅವರಿಗೆ ಅನ್ಯ ಧರ್ಮಗಳ ಬಗ್ಗೆಯೂ ಒಲವಿತ್ತು. ವಿದ್ಯಾವಂತನಾಗಿದ್ದರೂ ಅನಾಗರಿಕತೆಯನ್ನು ತೋರುತ್ತಿದ್ದಾನೆ. ಟೀಕೆ ಮಾಡುವುದೆಂದರೆ ದ್ವೇಷಿಸುವುದಲ್ಲ, ಅಸಹನೆ, ಅಗೌರವ ತೋರಿಸುವುದಲ್ಲ. ಟೀಕೆ ಮಾಡುವುದೆಂದರೆ ನಿನ್ನನ್ನು ಬೆಳೆಸುವುದು.
ಎಲ್ಲಾ ಧರ್ಮಗಳು ಸಮಾನತೆಯನ್ನು ಸಾರುತ್ತದೆ. ಇದನ್ನೇ ಸಂವಿಧಾನವು ಹೇಳಿದೆ. ಸೋದರರಂತೆ ಬಾಳುವ ಪರಿಸ್ಥಿತಿ ನಿರ್ಮಾಣ ಮಾಡುವುದೇ ಎಲ್ಲಾ ಧರ್ಮಗಳ ಜವಾಬ್ದಾರಿಯಾಗಿರುತ್ತದೆ. ಒಬ್ಬ ಒಳ್ಳೆ ಮುಸ್ಲಿಂ ಹಿಂದೂವನ್ನು ದ್ವೇಷಿಸುವುದಿಲ್ಲ, ಹಾಗೆ ಒಬ್ಬ ಒಳ್ಳೆ ಹಿಂದೂ ಮುಸ್ಲಿಂ ಧರ್ಮದವರನ್ನು ದ್ವೇಷಿಸುವುದಿಲ್ಲ ಎಂದ ಅವರು, ದುಡಿಮೆ ಮಾರ್ಗ, ಸುಳ್ಳು ಹೇಳದಿರುವ ಮಾರ್ಗ, ಬಯ್ಯದಿರುವ ಮಾರ್ಗವನ್ನು ಅನುಸರಿಸುವುದು ನಿಜವಾದ ಧರ್ಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಂತರ ಮಾತನಾಡಿದ ಬೇಲಿಮಠದ ಶಿವರುದ್ರ ಸ್ವಾಮಿಜಿ, ಧರ್ಮ ಎನ್ನುವ ನಿಜವಾದ ವ್ಯವಸ್ಥೆಯನ್ನೇ ಮರೆತಿದ್ದೇವೆ. ಧರ್ಮ ಮತಗಳ ನಡುವೆ ಇರುವ ವ್ಯತ್ಯಾಸವೆಂದರೆ ಧರ್ಮವೆಂದರೆ ಬೆಳಕು, ಮತ ಎನ್ನುವುದು ದೀಪ. ಮತಗಳನ್ನು ಮನುಷ್ಯನು ಕಟ್ಟಿಕೊಂಡಿದ್ದಾನೆ. ಆದರೆ, ಒಂದೇ ಅರ್ಥ ನೀಡುವ ಎಲ್ಲಾ ಧರ್ಮಗಳು ಇಡೀ ವಿಶ್ವಕ್ಕೆ ಬೆಳಕು ನೀಡುತ್ತದೆ ಎಂದು ಹೇಳಿದ್ದಾರೆ.
Advertisement