ಬಾದಾಮಿಗೆ ಅಂತಾರಾಷ್ಟ್ರೀಯ ಮನ್ನಣೆ
ಬಾಗಲಕೋಟೆ: ಚಾಲುಕ್ಯರ ರಾಜಧಾನಿ ಬಾದಾಮಿಯನ್ನು `ಹೃದಯ್ ಯೋಜನೆಯಡಿ ಅಭಿವೃದ್ಧಿ ಪಡಿಸುತ್ತಿರುವುದರಿಂದ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ್ ತಿಳಿಸಿದರು.ಬಾದಾಮಿಯಲ್ಲಿ ಗುರುವಾರ ಆಯೋಜಿಸಲಾ ದ ರಾಷ್ಟ್ರೀಯ ಪಾರಂಪರಿಕ ತಾಣ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಹೃದಯ್ (ಪಾರಂಪರಿಕ ನಗರ ಅಭಿವೃದ್ಧಿ ಯೋಜನೆ) ಅಡಿ ಬಾದಾಮಿಯನ್ನು ಆಯ್ಕೆ ಮಾಡಿಕೊಂಡಿದ್ದು, ಈ ಸಂಬಂಧ ಈಗಾಗಲೇ ರು. 22.36 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಜಿಲ್ಲಾಡಳಿತ ರೂಪಿಸಿದ್ದ ವಿಸ್ಕೃತ ಯೋಜನಾ ವರದಿ (ಡಿಪಿಆರ್) ಪುನರ್ ಪರಿಶೀಲಿಸಲು ಇಂಟ್ಯಾಕ್ ಸಂಸ್ಥೆ ಅಧಿಕಾರಿಗಳು ಆಗಮಿಸಿದ್ದಾರೆ. ಮೂರು ದಿನಗಳ ಕಾಲ ನಡೆಯವ ಕಾರ್ಯಾಗಾರದಲ್ಲಿ ಕೇಳಿ ಬರುವ ಅಭಿಪ್ರಾಯ ಹಾಗೂ ಸಲಹೆಗಳನ್ನು ಆಧರಿಸಿ ಡಿಪಿಆರ್ ಪರಿಷ್ಕರಿಸಲಾಗುವುದು ಎಂದು ಹೇಳಿದರು.
ಹೃದಯ್ ಯೋಜನೆಗೆ ಕೇಂದ್ರ ಸರ್ಕಾರ ಒಟ್ಟಾರೆ ರು.500 ಕೋಟಿ ಅನುದಾನ ಕಾಯ್ದಿರಿಸಿದೆ. ಬಾದಾಮಿ ಅಭಿವೃದ್ಧಿಪಡಿಸಲು ಪ್ರಥಮ ವರ್ಷ ರು. 22.36 ಕೋಟಿ ಲಭಿಸಲಿದೆ. ನಾಲ್ಕು ವರ್ಷಗಳಲ್ಲಿ ಪೂರ್ಣ ಪ್ರಮಾಣದ ಪಾರಂಪರಿಕ ತಾಣವಾಗಿ ಬಾದಾಮಿ ರೂಪಾಂತರಗೊಳ್ಳಲಿದೆ. ಇದಕ್ಕಾಗಿ ರು. 100 ಕೋಟಿವರೆಗೆ ಅನುದಾನ ಹರಿದು ಬರಲಿದೆ. ಅಗಸ್ತ್ಯ ತೀರ್ಥದ ಮೇಲಿರುವ ಮನೆ ಗಳ ಸ್ಥಳಾಂತರ ಸೇರಿದಂತೆ ಹಲವು ಚಟುವಟಿಕೆ ಕಡೆ ಜಿಲ್ಲಾಡಳಿತ ಗಂಭೀರ ಗಮನ ಹರಿಸಿದ್ದು ಮೊದಲ ಹಂತದಲ್ಲಿ ಅಂತಿಮಗೊಳಿಸಲಾಗುತ್ತಿದೆ. ಅಗಸ್ತ್ಯ ತೀರ್ಥ ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಒಳಪಡುತ್ತಿರುವುದರಿಂದ ಅದರ ನೆರವು ಪಡೆದು ಮುಂದುವರಿಯಲಾಗುತ್ತಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ