ರಾಜ್ಯ ಸರ್ಕಾರ ಯಾವುದೇ ಜಾತಿ, ಧರ್ಮದ ಪರವಲ್ಲ

ಯಾವುದೇ ಜಾತಿ, ಧರ್ಮದ ಪರವಾಗಿ ಸರ್ಕಾರ ಇರಲು ಸಾಧ್ಯವಿಲ್ಲ. ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತುವುದು ಹಾಗೂ ಅವರ ಸರ್ವೋದಯವೇ ಸಿದ್ದರಾಮಯ್ಯ...
ಎಚ್ ಸಿ ಮಹದೇವಪ್ಪ
ಎಚ್ ಸಿ ಮಹದೇವಪ್ಪ

ಹಾವೇರಿ: ಯಾವುದೇ ಜಾತಿ, ಧರ್ಮದ ಪರವಾಗಿ ಸರ್ಕಾರ ಇರಲು ಸಾಧ್ಯವಿಲ್ಲ. ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತುವುದು ಹಾಗೂ ಅವರ ಸರ್ವೋದಯವೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಧ್ಯೇಯ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮೇ 16ರಂದು ದಾವಣಗೆರೆಯಲ್ಲಿ ಸರ್ವೋದಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 5 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 100ಕ್ಕೂ ಹೆಚ್ಚು ಅಂಶಗಳನ್ನು ಈಡೇರಿಸಲಾಗಿದೆ. ಉಳಿದವನ್ನು ಮುಂದಿನ 3 ವರ್ಷಗಳಲ್ಲಿ ಈಡೇರಿಸಲಾಗುವುದು. ನಮ್ಮ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿದೆ. ಇದನ್ನು ರಾಜ್ಯದ ಜನತೆಗೆ ತಿಳಿಹೇಳಲು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸರ್ವರಿಗೂ ಸಮಪಾಲು, ಸಮಬಾಳು ಎಂಬ ತತ್ವದಂತೆ ನಮ್ಮ ಸರ್ಕಾರ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದೆ.

ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದವರನ್ನು ಮೇಲೆತ್ತಿ, ಪೂರಕವಾಗಿ ಕಾರ್ಯನಿರ್ವಹಿಸುವುದೇ ಸರ್ಕಾರದ ಜವಾಬ್ದಾರಿ. ಇಂಥವರು ಸ್ವಾಭಿಮಾನದಿಂದ ಬದುಕುವಂತೆ ನಮ್ಮ ಸರ್ಕಾರ ಯೋಜನೆಯನ್ನು ರೂಪಿಸಿದೆ ಎಂದರು. 11 ಸಾವಿರ ಕಿಮೀ ರಸ್ತೆ ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ 11 ಸಾವಿರಕ್ಕೂ ಹೆಚ್ಚು ಉದ್ದದ ರಸ್ತೆ ನಿರ್ಮಿಸಲಾಗಿದೆ. ಗುಂಡಿ ಮುಚ್ಚುವ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಲಾಗಿದೆ. ರೋಡ್ ಎಸ್ಟಿಮೇಶನ್ ಸಿಸ್ಟಮ್ ಎಂಬ ವೈಜ್ಞಾನಿಕ ವಿಧಾನ ರೂಪಿಸಿದ ಏಕೈಕ ರಾಜ್ಯವಾಗಿದ್ದು, ರಸ್ತೆ ಕಾಮಗಾರಿಗಳ ಹಲವು ಹಂತವನ್ನು ಅಂತರ್ಜಾಲದಲ್ಲಿ ತಿಳಿಯಲು ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಸಿಸ್ಟಮ್ ಅಳವಡಿಸಿದ್ದೇವೆ. ಇವು ಪಾರದರ್ಶಕವಾಗಿ ಇಲಾಖೆ ಕಾಮಗಾರಿ ನಡೆಸಲು ಸಹಾಯಮಾಡುತ್ತವೆ.

ರಾಜ್ಯದಲ್ಲಿ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳಿದ್ದು, ಅವುಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು-ಮೈಸೂರು, ಬೀದರ್-ಚಾಮರಾಜನಗರ, ರಾಣಿ ಬೆನ್ನೂರು-ಬೈಂದೂರು, ವಿಜಯ ಪುರ-ಹುಬ್ಬಳ್ಳಿ ಇತ್ಯಾದಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com