ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಶೆಲ್ ಯುಕ್ತ ಎಲ್ಇಡಿ ಹಾರವನ್ನು ಮುಖ್ಯಮಂತ್ರಿಗೆ ಹಾಕಿದ ಪ್ರಕರಣದ ತನಿಖೆ ಭರದಿಂದ ಸಾಗಿದೆ. ಇನ್ನೆರಡು ದಿನದಲ್ಲಿ ಘಟನೆ ಕುರಿತು ವರದಿ ನೀಡಲು ತನಿಖಾಧಿಕಾರಿ ನಿರ್ಧರಿಸಿದ್ದಾರೆ.
ಗುರುವಾರ ವಿಧಾನಸೌಧಕ್ಕೆ ಆಗಮಿಸಿದ ಪೂರ್ವ ವಲಯ ಹೆಚ್ಚುವರಿ ಆಯುಕ್ತ ಹರಿಶೇಖರನ್ ಅವರು ಸ್ಥಳ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿದರು. ಈ ನಡುವೆಯೇ ಮೂರು ಪ್ರವೇಶ ದ್ವಾರ ಮತ್ತು ತಪಾಸಣಾ ಪಾಯಿಂಟ್ ಗಳಲ್ಲಿ ಅಂದು ಕಾರ್ಯನಿರ್ವಹಿಸಿದ್ದ 17 ಮಂದಿಗೆ ನೋಟಿಸ್ ನೀಡಿ ಅವರಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ. ಮುಖ್ಯಮಂತ್ರಿಯವರ ಛಾಯಾಗ್ರಾಹಕರಿಂದಲೂ ಹೇಳಿಕೆ ಪಡೆಯಲಾಗಿದೆ.
ಇನ್ನೊಂದೆಡೆ ಘಟನೆ ನಡೆದ ಮರುದಿನದಿಂದಲೇ ವಿಧಾನ ಸೌಧದಲ್ಲಿ ಭದ್ರತಾ ವ್ಯವಸ್ಥೆ ಚುರುಕುಗೊಂಡಿದೆ. ವಿಧಾನಸೌಧದ ಗೇಟ್ ನಲ್ಲಿ ಪ್ರತಿಯೊಬ್ಬರ ಗುರುತಿನ ಚೀಟಿಯ ತಪಾಸಣೆ ನಡೆಸಿ ಕಳುಹಿಸಲಾಗುತ್ತಿದೆ. ಜೊತೆಗೆ ಪ್ರವೇಶ ದ್ವಾರದಲ್ಲಿ ಲೋಹ ಶೋಧಕದ ಮೂಲಕ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಲಾಗುತ್ತಿದೆ. ಕೆಟ್ಟು ನಿಂತಿದೆ ಲಗೇಜ್ ಸ್ಕ್ಯಾನರ್ ವಿಧಾನಸೌಧದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಲಗೇಜ್ ಸ್ಕ್ಯಾನರ್ಗಳು ಕೆಟ್ಟು ನಿಂತಿವೆ. ನಾಲ್ಕು ದ್ವಾರಗಳಲ್ಲಿರುವ ಲಗೇಜ್ ಸ್ಕ್ಯಾನರ್ ಬಳಕೆಗೆ ಬಾರದ ಹಿನ್ನೆಲೆಯಲ್ಲಿ ಅಲ್ಲಿರುವ ಪೊಲೀಸರು ಲೋಹ ಶೋಧದ ಮೂಲಕ ಬ್ಯಾಗ್ ಗಳ ಮೇಲೊಂದು ಸುತ್ತುಹಾಕಿ ಕಳುಹಿಸುತ್ತಿದ್ದಾರೆ.
ಈ ಬಗ್ಗೆ ಅಲ್ಲಿರುವ ಒಬ್ಬ ಸಿಬ್ಬಂದಿಯನ್ನು ವಿಚಾರಿಸಿದರೆ, ಈ ಯಂತ್ರಗಳು ಕೆಟ್ಟು ನಿಂತು ಬಹಳದಿನಗಳಾಗಿವೆ. ಮೆಟಲ್ ಡಿಟೆಕ್ಟರ್ ಮೂಲಕ ಬ್ಯಾಗ್ಗಳನ್ನು ಸೂಕ್ಷ್ಮವಾಗಿ ಅವಲೋಕಿಸಲು ಆಗುವುದಿಲ್ಲ. ಕೇವಲ ಲೋಹ ಸಾಮಗ್ರಿ ಇದೆಯೋ ಇಲ್ಲವೋ ಎಂದಷ್ಟೆ ತಿಳಿಯುತ್ತದೆ ಎಂದರು.
Advertisement