ಬೆಂಗಳೂರು: ಕೈಗಾರಿಕೆಗಳ ರಾಸಾಯನಿಕ ಶೇಖರಣೆಯಿಂದಾಗಿ ಕಲುಷಿತಗೊಂಡಿರುವ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳನ್ನು ಅಭಿವೃದ್ಧಿಪಡಿಸಲು 1,000 ಕೋಟಿ ರೂಪಾಯಿ ಅಗತ್ಯವಿದೆ ಎಂದು ಬೆಂಗಳೂರು ಜಲಮಂಡಳಿ ಹೇಳಿದೆ.
ಬೆಳ್ಳಂದೂರು ಕೆರೆ ಮಾಲಿನ್ಯದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ. ಅಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ಜಲಮಂಡಳಿ ಅಧಿಕಾರಿಗಳು, ಕೆರೆ ಅಭಿವೃದ್ಧಿ ಪಡಿಸಲು 1,000 ಕೋಟಿ ರೂಪಾಯಿ ಅಗತ್ಯವಿದೆ ಎಂದು ಹೇಳಿದ್ದಾರೆ. ಬೆಳ್ಳಂದೂರು ಹಾಗೂ ವರ್ತೂರು ಕೆರೆ ನೀರಿನ ಒಳಹರಿವಿನ ಪ್ರದೇಶದಲ್ಲಿ ಸಂಸ್ಕರಣಾ ಘಟಕಗಳನ್ನು ಅಳವಡಿಸಿವ ಮೂಲಕ ಕೆರೆಗಳು ಕಲುಷಿತಗೊಳ್ಳುವುದನ್ನು ತಡೆಗಟ್ಟಬಹುದಾಗಿದೆ, ಈ ಪ್ರಕ್ರಿಯೆಗೆ ಸುಮಾರು 1, ೦೦೦ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಮುಖ್ಯ ಇಂಜಿನಿಯರ್ ವೆಂಕಟರಾಜು ಉಪಲೋಕಾಯುಕ್ತರಿಗೆ ಮಾಹಿತಿ ನೀಡಿದ್ದಾರೆ.
ಬೆಳ್ಳಂದೂರು ಕೆರೆಗೆ ಸುಮಾರು 17 ಒಳಹರಿವಿನ ಬಿಂದುಗಳಿದ್ದು ಈ ಪೈಕಿ 5 ಮಳೆಗಾಲದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ. ಈ ಕರೆಗೆ 2 ಕಡೆಗಳಿಂದ ಮಾತ್ರ ಸಂಸ್ಕರಿಸಿದ ನೀರು ಹರಿಯುತ್ತದೆ. ಉಳಿದಿದ್ದೆಲ್ಲಾ ಕಲುಷಿತ. ಈ ಹಿನ್ನೆಲೆಯಲ್ಲಿ ಕೆರೆಗೆ ಸುಸಜ್ಜಿತವಾದ ಸಂಸ್ಕರಣಾ ಘಟಕ ಅಳವಡಿಸಲು ಬೆಂಗಳೂರು ಜಲಮಂಡಳಿ ಚಿಂತನೆ ನಡೆಸಿದ್ದು ಅದ ಅಂದಾಜು ವೆಚ್ಚದ ಬಗ್ಗೆ ಉಪಲೋಕಾಯುಕ್ತರಿಗೆ ಮಾಹಿತಿ ನೀಡಿದೆ.
ಕಲುಷಿತಗೊಂಡು ನಿರಂತರ ನೊರೆ ಹೊರಹಾಕುತ್ತಿರುವ ಬೆಳ್ಳಂದೂರು-ವರ್ತೂರು ಕೆರೆಗಳನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವಂತೆ ಉಪಲೋಕಾಯುಕ್ತರು ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಕೇವಲ ಸಂಸ್ಕರಣಾ ಘಟಕ ಅಳವಡಿಸಿ ಕೆರೆ ಉಳಿಸಿಕೊಳ್ಳುವುದಕ್ಕೆ 1,000 ಕೋಟಿ ರೂಪಾಯಿ ಅಗತ್ಯವಿದ್ದರೆ ಇನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಎಷ್ಟು ಕೋಟಿರೂಪಾಯಿ ಅಗತ್ಯವಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
Advertisement