ಅಕ್ರಮ ಲಾಟರಿ ಕಿಂಗ್‍ಪಿನ್ ಪಾರಿರಾಜನ್ ಬಾಸ್ ಯಾರು ಗೊತ್ತಾ?

ಅಕ್ರಮ ಲಾಟರಿ ಹಗರಣದ ರೂವಾರಿ ಪಾರಿ ರಾಜನ್ ಜತೆ ಸಂಪರ್ಕದಲ್ಲಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಸೇರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: `ಅಕ್ರಮ ಲಾಟರಿ' ಹಗರಣದ ರೂವಾರಿ ಪಾರಿ ರಾಜನ್ ಜತೆ ಸಂಪರ್ಕದಲ್ಲಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಸೇರಿ 23 ಅಧಿಕಾರಿಗಳ ಪಟ್ಟಿಯನ್ನು ಸಿಐಡಿ ಸಿದ್ಧಪಡಿಸಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಿದೆ.

ಏತನ್ಮಧ್ಯೆ, ಕಿಂಗ್‍ಪಿನ್ ಪಾರಿ ರಾಜನ್‍ಗೂ ಒಬ್ಬ `ಮೈಕೆಲ್' ಹೆಸರಿನ ಬಾಸ್ ಇರುವುದು ಗೊತ್ತಾಗಿದ್ದು, ಆತ ಯಾರು, ಆತನ ಹಿನ್ನೆಲೆಯೇನು ಎಂಬುದೂ ಸೇರಿದಂತೆ ಇತರೆ ವಿವರಗಳನ್ನು ಕಲೆಹಾಕುವಲ್ಲಿ ಸಿಐಡಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಹಗರಣದ ವ್ಯಾಪ್ತಿ ರಾಜ್ಯದ ಎಲ್ಲ ಮೂಲಗಳಿಗೂ ಹಬ್ಬಿದೆ. ಈ ಪೈಕಿ ತನಿಖೆಗೊಳಪಡುವ ಅಧಿಕಾರಿಗಳು ಯಾರು ಎನ್ನುವುದು ಸಿಐಡಿ ಅಧಿಕಾರಿಗಳಿಂದ ಮಾತ್ರ ತಿಳಿದು ಬರಬೇಕಿದೆ.

ಆದರೆ, ಮೂಲಗಳ ಪ್ರಕಾರ ಪಾರಿ ರಾಜನ್ ಜತೆ ನಂಟು ಹೊಂದಿರುವ ಬಹುತೇಕ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕಡ್ಡಾಯವಾಗಿ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಿಸುವ ಸಾಧ್ಯತೆ ಇದೆ. ಪ್ರಕರಣದಲ್ಲಿ ದೊಡ್ಡ ಮಟ್ಟದ ಅಧಿಕಾರಗಳ ದಂಡು ಇರುವುದರಿಂದ ಪಾರಿ ರಾಜನ್ ಕಾಲ್ ಡಿಟೇಲ್ ರೆಕಾರ್ಡ್‍ನಲ್ಲಿ (ಸಿಡಿಆರ್) ಎಲ್ಲ ಅಧಿಕಾರಿಗಳ ವಿಚಾರಣೆ ನಡೆಸುವುದು ಕಡ್ಡಾಯ. ಹೆಚ್ಚಿನ ಸಂಪರ್ಕ ಹೊಂದಿರುವವರನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕರೆಸಿಕೊಂಡು, ವಿಚಾರಣೆಗೆ ಒಳಪಡಿಸಲಾಗುತ್ತದೆ. ಅದಕ್ಕಾಗಿ ಎಲ್ಲಾ ಅಧಿಕಾರಿಗಳಿಗೂ ನೋಟಿಸ್ ನೀಡಲು ಸಿದ್ಧತೆ ನಡೆದಿದೆ. ಈ ವಿಷಯವನ್ನು ಸಿಐಡಿ ಮೂಲಗಳು ಖಚಿತಪಡಿಸಿವೆ.

ಶನಿವಾರವಷ್ಟೇ ಅಮಾನತುಗೊಂಡಿ ರುವ ಹೆಚ್ಚುವರಿ ಪೊಲೀಸ್ ಆಯುಕ್ತ ರಾಗಿದ್ದ ಅಲೋಕ್ ಕುಮಾರ್ ಹಾಗೂ ಎಸ್ಪಿ ಧರಣೀಂದ್ರ ಅವರನ್ನು ಸಿಐಡಿ ಅಧಿಕಾರಿಗಳು ಭಾನುವಾರ 8 ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಇಬ್ಬರು ಅಧಿಕಾರಿಗಳು ಸಿಐಡಿ ಕಚೇರಿಗೆ ಆಗಮಿಸಿದ್ದರು. ರಾತ್ರಿ 8 ಗಂಟೆವರೆಗೂ ಇಬ್ಬರು ಸಿಐಡಿ ಕಚೇರಿಯಲ್ಲೇ ಇದ್ದರು. ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಡಿಐಜಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ, ಎಸ್ಪಿ ಟಿ.ಡಿ ಪವಾರ್ ಅವರು ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದ್ದಾರೆ. ಇಬ್ಬರು ಅಧಿಕಾರಿಗಳು ತಮಗೂ ಹಾಗೂ ರಾಜನ್ ಜತೆ ಹೊಂದಿರುವ ಸ್ನೇಹ, ನಂಟಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಅಮಾನತು, ವರ್ಗಾವಣೆ
ಹಗರಣದಲ್ಲಿ ಹೆಸರು ತಳುಕು ಹಾಕಿಕೊಂಡಿರುವ ಅ„ಕಾರಿಗಳ ಅಮಾನತು, ವರ್ಗಾವಣೆಯಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಮೂವರು ನಿವೃತ್ತ ಅಧಿಕಾರಿಗಳ ಹೊರತುಪಡಿಸಿ ಉಳಿದವರೆಲ್ಲರೂ ಉನ್ನತ ಸ್ಥಾನದಲ್ಲಿದ್ದು, ಸಿಐಡಿ ತನಿಖೆಯ ಮೇಲೆ ಪರಿಣಾಮ ಬೀರಲು ಯತ್ನಿಸುತ್ತಾರೆ ಎನ್ನುವ ಕಾರಣಕ್ಕೆ ಅವರ ಮೇಲೆ ಕ್ರಮಕ್ಕೆ ಸಿಐಡಿ ಪೊಲೀಸ್ ಮಹಾ ನಿರ್ದೇಶಕರಿಗೆ ಶಿಫಾರಸು ಮಾಡುವ ಸಾಧ್ಯತೆಗಳಿವೆ. ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿ, ಇಲಾಖೆಗೆ ಕಠಿಣ ಸಂದೇಶ ರವಾನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com