
ಬೆಂಗಳೂರು: ನಗರದ ಚಾಮರಾಜಪೇಟೆಯ ಆಲೂರು ವೆಂಕಟರಾಯರ ರಸ್ತೆಗೆ ಟಿಪ್ಪು ಸುಲ್ತಾನ್ ಅರಮನೆ ರಸ್ತೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡಿರುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಆಗ್ರಹಿಸಿದ್ದಾರೆ.
ಆಲೂರು ವೆಕಂಟರಾಯರ ರಸ್ತೆ ಹೆಸರನ್ನು ಟಿಪ್ಪು ಹೆಸರಾಗಿ ಬದಲಾವಣೆ ಮಾಡಲು ಬಿಬಿಎಂಪಿ ಹೊರಟಿದೆ, ಇದು ಘೋರ ಅಪರಾಧವಾಗಿದೆ. ಆಲೂರು ವೆಕಂಟರಾಯರು ಕನ್ನಡಕ್ಕಾಗಿ ದುಡಿದಂತವರು. ಅಲ್ಲದೇ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು, ಧಾರವಾಡದಲ್ಲಿ ನೆಲಸಿ ಮರಾಠಿಗರ ವಿರುದ್ಧ ದನಿ ಎತ್ತಿದವರು. ಇಂತಹ ಹೋರಾಟಗಾರನ ಹೆಸರಿರುವ ರಸ್ತೆಗೆ, ನರ ಹಂತಕ, ಹಿಂದೂಗಳನ್ನು ಕೊಲ್ಲಲು ಹೊರಟಿದ್ದ ಟಿಪ್ಪು ಸುಲ್ತಾನ್ ಹೆಸರನ್ನು ಮರುನಾಮಕರಣ ಮಾಡಲು ಬಿಬಿಎಂಪಿ ಹೊರಟಿದೆ.
ಟಿಪ್ಪು ಸುಲ್ತಾನ್ ದೊಡ್ಡ ಕಪ್ಪು ಚುಕ್ಕೆ. ಟಿಪ್ಪು ವೀರ, ಶೂರ, ಯೋಧ ನಿಜ ಆದರೆ, ಕ್ರೂರಿ. ಅನ್ಯ ಧರ್ಮದ ದ್ವೇಷ ಅವನಲ್ಲಿತ್ತು. ಎಲ್ಲಾ ಹಿಂದೂಗಳನ್ನು ಕೊಲ್ಲಲೇಬೇಕು ಎಂದಿದ್ದವನು. ಇಂತಹವನ ಹೆಸರನ್ನು ರಸ್ತೆಗೆ ಮರು ನಾಮಕರಣ ಮಾಡುವುದು ಸರಿಯಲ್ಲ. ಇದೇ ರೀತಿ ಮುಂದುವರೆದರೆ ಅನೇಕ ಕನ್ನಡ ಹೋರಾಟಗಾರರ ಹೆಸರು ನಶಿಸಿಹೋಗುತ್ತದೆ ಎಂದಿದ್ದಾರೆ.
ಕೂಡಲೇ, ಬಿಬಿಎಂಪಿ ಈ ಪ್ರಸ್ತಾವನೆಯನ್ನು ಕೈಬಿಡಬೇಕು. ಹಾಗೆ, ವೆಂಕಟರಾಯರ ರಸ್ತೆಯೆಂದು ಮುಂದುವರೆಸಬೇಕು. ಇಲ್ಲವಾದರೆ, ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಡಾ.ಚಿದಾನಂದ ಮೂರ್ತಿ ಎಚ್ಚರಿಸಿದ್ದಾರೆ.
ಕರ್ನಾಟಕ ಗಡಿ ಕಾನೂನು ಸಲಹಾ ಸಮಿತಿ ಪುನಾರಚನೆಗೆ ಒತ್ತಾಯ
ಸುಪ್ರೀಂ ಕೋರ್ಟ್ ನಲ್ಲಿರುವ ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸರ್ಕಾರ ತೀವ್ರ ಆಸಕ್ತಿವಹಿಸಿದೆ. ಆದರೆ, ಈ ವಿಷಯದಲ್ಲಿ ಕರ್ನಾಟಕ ಗಡಿ ಕಾನೂನು ಸಲಹಾ ಸಮಿತಿ ಆಸಕ್ತಿ ತೋರುತ್ತಿಲ್ಲ ಎಂದು ಬೆಳಗಾವಿ ಕನ್ನಡ ಬೇಸರ ವ್ಯಕ್ತಪಡಿಸಿದ್ದವು. ಈ ಹಿನ್ನಲೆಯಲ್ಲಿ ಕನ್ನಡ ನಾಡು ನುಡಿಗಳ ಬಗ್ಗೆ ಹೆಚ್ಚು ಆಸಕ್ತಿ ಇರುವ ನ್ಯಾ.ವಿ.ಎಸ್ ಮಳಿಮಠ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ಗಡಿ ಸಮಸ್ಯೆ ಅರಿತಿರುವ ಶ್ರೇಷ್ಠರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿ, ಈಗಿನ ಕಾನೂನು ಸಲಹಾ ಸಮಿತಿಯನ್ನು ಪುನಾರಚನೆ ಮಾಡಿ ಎಂದು ಡಾ.ಎಂ ಚಿದಾನಂದಮೂರ್ತಿಗಳು ಒತ್ತಾಯಿಸಿದ್ದಾರೆ.
Advertisement