ಬೆಂಗಳೂರು; ಭಾರತವು ವೈವಿಧ್ಯತೆಗಳಿಂದ ಕೂಡಿದ್ದು ಧರ್ಮ, ಜಾತಿ, ಭಾಷೆಗೆ ತನ್ನದೇ ಆದ ಮಹತ್ವವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವವರು ಈ ವೈವಿಧ್ಯತೆಯನ್ನು ಸಹಿಸಿಕೊಳ್ಳುವಂತಾಗ ಬೇಕೆ ವಿನಃ ಅಸಹಿಷ್ಣುತೆ ಸರಿಯಲ್ಲ. ಅಸಹಿಷ್ಣುತೆಯಿಂದ ಸಮಾಜದ ಶಾಂತಿ, ನೆಮ್ಮದಿ ಹಾಳಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ 2015ನೇ ಸಾಲಿನ ರಾಜ್ಯಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 60 ಮಂದಿ ಸಾಧಕರನ್ನು ಗೌರವಿಸಿ ಮಾತನಾಡಿದ. ಅವರು, ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆಯಲ್ಲಿ ಹೇಳಿರುವಂತೆ ನಮ್ಮದು ಸರ್ವಜನಾಂಗ ಶಾಂತಿಯ ತೋಟ. ಇದು ನಮ್ಮ ಸಂಸ್ಕೃತಿ, ಪರಂಪರೆಯ ದ್ಯೋತಕವಾಗಿದೆ. ಇದಕ್ಕೆ ಅಡ್ಡಿಪಡಿಸುವವರ ಕೃತ್ಯವನ್ನು ಇಡೀ ಸಮಾಜ ಒಕ್ಕೊರಲಿಂದ ಖಂಡಿಸಬೇಕು ಎಂದು ಕರೆ ನೀಡಿದರು.
ಪ್ರಶಸ್ತಿಗೆ ಶಿಫಾರಸ್ಸಿಲ್ಲ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೂರು ಭಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದೇವೆ. ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿರುವ ವಿಚಾರವಾಗಿ ಇದುವರೆಗೆ ಯಾವುದೇ ಟೀಕೆ ಟಿಪ್ಪಣಿ ಬಂದಿಲ್ಲ. ಈ ಹಿಂದೆ ಇದ್ದ ಸರ್ಕಾರ ಮನಸ್ಸೊ ಇಚ್ಚೆ ಪ್ರಶಸ್ತಿ ನೀಡುತ್ತಿತ್ತು. ಅದಕ್ಕೆ ತಡೆಯೊಡ್ಡಿ ಸಾಧಕರಿಗೆ, ಅರ್ಹರಿಗೆ ಪ್ರಶಸ್ತಿ ಸಿಗುವಂತೆ ಮಾಡಿದ್ದೇವೆ.ಪ್ರಶಸ್ತಿ ಆಯ್ಕೆಗಾಗಿ ಪ್ರತ್ಯೇತ ಸಮಿತಿ ರಚನೆ ಮಾಡಿದ್ದೇವೆ.ಆ ಸಮಿತಿಯ ಸಭೆಯಲ್ಲಿ ಒಂದು ಬಾರಿ ಮಾತ್ರ ಭಾಗವಹಿಸಿ. ಆ ಸಮಿತಿ ಆಯ್ಕೆ ಮಾಡುವ ಪಟ್ಟಿಗೆ ಅಂಕಿತ ಹಾಕುತ್ತೇನೆ ಎಂದಿದ್ದೆ. ಯಾರ ಹೆಸರನ್ನು ಶಿಪಾರಸ್ಸು ಮಾಡುವುದಿಲ್ಲ, ಮಾಡಿಲ್ಲ ಎಂದೂ ಸ್ಪಷ್ಟ ಪಡಿಸಿದ್ದೆ ಎಂದರು.
2015ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ 60 ಮಂದಿ ಪೈಕಿ ಕ್ರಿಕೆಟಿಗ ವಿನಯ್ ಕುಮಾರ್, ರಂಗಭೂಮಿ ಕಲಾವಿದೆ ಮುಮ್ತಾಜ್ ಬೇಗಂ, ಸಮಾಜ ಸೇವಕ ಡಾ. ಕಾರಿನ್ ಕುಮಾರ್ ಗೈರು ಹಾಜರಾಗಿದ್ದರು.
Advertisement