ಕನ್ನಡ ಹೋರಾಟಗಾರರ ಬೇಡಿಕೆಯಂತೆ ಸ್ಮಾರಕಕ್ಕೆ ಚಿಂತನೆ: ಸಿಎಂ ಸಿದ್ದರಾಮಯ್ಯ ಭರವಸೆ

ಕನ್ನಡ ಏಕೀಕರಣ ಆರಂಭವಾದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆ ವಿಶೇಷ ಗಮನ ಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಏಕೀಕರಣವಾಗಿ ಅರವತ್ತನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಏಕೀಕರಣ ನೆನಪಿನಲ್ಲಿ ಆಚರಿಸುತ್ತಿರುವ ಕನ್ನಡ ರಾಜೋತ್ಸವ ನಮ್ಮೆಲ್ಲರ ಹರುಷದ ಹಬ್ಬ. ಹಾಗಾಗಿ ಕನ್ನಡ ಏಕೀಕರಣ ಆರಂಭವಾದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆ ವಿಶೇಷ ಗಮನ ಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅಭಿಮಾನಿ ಬಳಗದಿಂದ ಭಾನುವಾರ ಎಸ್ ಬಿಎಂ ವೃತ್ತದಲ್ಲಿ ಆಯೋಜಿಸಿದ್ದ ಕನ್ನಡ ತಾಯಿ ಅಣ್ಣಮ್ಮ ದೇವಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು, ಬೇಡಿಕೆಯಂತೆ ಕನ್ನಡ ಏಕೀಕರಣ ಆರಂಭವಾದ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಚಿಂತಿಸಲಾಗುವುದು ಎಂದರು.

ವಾಟಾಳ್ ನಾಗರಾಜ್ ನಾಡು ಕಂಡ ಅಪ್ರತಿಮ ಹೋರಾಟಗಾರ. ಸ್ವಾರ್ಥ, ಅಧಿಕಾರದ ಆಸೆಯಿಲ್ಲದೆ ನಾಡು, ನುಡಿ, ಕಲೆ, ಸಂಸ್ಕೃತಿ ಉಳಿವಿಗೆ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಇವರ ನಿಸ್ವಾರ್ಥ ಹೋರಾಟದ ಸೇವೆ ನನಗೂ ಸ್ಪೂರ್ತಿಯಾಗಿದೆ. ಈ ಹಿಂದೆ ಮೈಸೂರಿನ ಟೌನ್‍ಹಾಲ್‍ನಲ್ಲಿ ವಾಟಾಳ್ ನಾಗರಾಜ್ ಮಾಡುತ್ತಿದ್ದ ಭಾಷಣ ಕೇಳಲು ಹೋಗುತ್ತಿದ್ದೆ. ಅಂದಿನಿಂದಲೂ ಅವರ ಬಗ್ಗೆ ಪ್ರೀತಿ, ಗೌರವ, ಅಭಿಮಾನವಿದೆ. ಮುಂದೆಯೂ ಇರಲಿದೆ ಎಂದು ಹೇಳಿದರು.

ಪರಭಾಷಿಕರಿಗೆ ಕನ್ನಡ: ಕನ್ನಡ ಏಕೀಕರಣ ಸಂದರ್ಭದಲ್ಲಿ ಪಿ.ಕಾಳಿಂಗರಾವ್ ಅವರು `ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು' ಎಂದು ಹೇಳಿದ್ದರು, ಅದರಂತೆ ನಾಡಿನ ಜನರು ಸುಖ ಸಮೃದ್ಧಿಯಿಂದ ಜೀವನಸಾಗಿಸಬೇಕು. ನಾಡು ಕನ್ನಡಮಯವಾಗಬೇಕು. ಆಗ ಮಾತ್ರ ಏಕೀಕರಣ ಸಾರ್ಥಕ. ವಿವಿಧ ಭಾಷೆಯ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಹಾಗಾಗಿ ಅನ್ಯ ಭಾಷಿಗರು ಇಲ್ಲಿಗೆ ಬಂದಾಗ ಕನ್ನಡವನ್ನೇ ಕಲಿಯುವ ವಾತಾವಣ ನಿರ್ಮಾಣವಾಗಬೇಕು. ಇದು ನಮ್ಮ ಡಿನ ಭಾಷೆ. ಹಾಗಾಗಿ ಇಲ್ಲಿ ನೆಲೆಸುವ ಎಲ್ಲರೂ ಕಡ್ಡಾಯವಾಗಿ ಕನ್ನಡ ಕಲಿಯಬೇಕು, ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆಯಬೇಕು. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕನ್ನಡ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ನಾಡಿನ ಹಬ್ಬವನ್ನು ಸರ್ವರೂ ವೈಭವದಿಂದ ಆಚರಿಸಬೇಕು. ಸರ್ಕಾರವೂ ಮಾತೃಭಾಷೆ ಉಳಿವಿಗೆ ವಿಶೇಷ ಆದ್ಯತೆ ನೀಡಲಿದೆ. ಆ ದಿಕ್ಕಿನಲ್ಲಿ ಸರ್ವ ಪ್ರಯತ್ನ ನಡೆಸಲಿದೆ ಎಂದು ಭರವಸೆ ನೀಡಿದರು.

ವಾಟಾಳ್ ನಾಗರಾಜ್ ಮಾತನಾಡಿ, ನಾಡಿನ ಜಧಾನಿಗೆ ವಲಸಿಗರು ಹೆಚ್ಚಾಗುತ್ತಿದ್ದಾರೆ. ಇದರಿಂದ ನ್ನಡದ ಅಳಿವು, ಉಳಿವಿನ ಪ್ರಶ್ನೆ ಎದುರಾಗಿದೆ. ಹೀಗಾಗಿ ವಲಸಿಗರನ್ನು ತಡೆಯಬೇಕಿದೆ. ಐಟಿ, ಬಿಟಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರದಲ್ಲಿ ವಾಹನ ಸಂಚಾರದ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಇದಕ್ಕೆ ಪರಿಹಾರವಾಗಿ ಮೇಲ್ಸೇತುವೆಗಳನ್ನು ನಿರ್ಮಿಸಲು ಸರ್ಕಾರ ಗಮನಕೊಡಬೇಕು ಎಂದು ಒತ್ತಾಯಿಸಿದರು. ಬಿಬಿಎಂಪಿ ಮೇಯರ್ ಬಿ.ಎನ್. ಜುನಾಥ್ ರೆಡ್ಡಿ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com