ಹಾಸನ: ಆಹಾರ ಸೇವನೆ ಅವರವರ ಇಚ್ಛೆಗೆ ಬಿಟ್ಟಿದ್ದು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಯಾರು ಯಾವ ಆಹಾರ ಬೇಕಾದರೂ ತಿನ್ನಬಹುದು. ಇದಕ್ಕೆ ಅಡ್ಡಿಪಡಿಸಲು ಆಗಲ್ಲ. ನನ್ನ ದೃಷ್ಟಿಯಲ್ಲಿ ಗೋಮಾಂಸ ಸೇವನೆ ಕುರಿತಾಗಿ ಚರ್ಚೆ ಅನಾವಶ್ಯಕ. ಯಾರು ಯಾವ ಆಹಾರವನ್ನು ಸೇವನೆ ಮಾಡಿದರೆ ಬೇಡ ಅನ್ನೋಕೆ ನಾನು ಯಾರು'ಎಂದರು.
ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ: ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವರು. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಪಕ್ಷದ ಚಿಹ್ನೆಯಡಿ ನಡೆಯುವುದರಿಂದ ಪಕ್ಷವನ್ನು ತಳಮಟ್ಟದಿಂದ ಬಲ ಪಡಿಸಬೇಕಾದ ಅಗತ್ಯತೆ ಇದೆ. ಬೆಳಗಾವಿಯಲ್ಲಿ ಈಗಾಗಲೇ ಎರಡು ದಿನಗಳ ಪ್ರವಾಸ ನಡೆಸಿದ್ದು, ಹಾಸನದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರಚಾರ ನಡೆಸಲಾಗುವುದು ಎಂದು ತಿಳಿಸಿದರು.
``ದೀಪಾವಳಿ ನಂತರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುವುದು. ನ.21 ರಂದು ಸಂಸತ್ ಕಲಾಪ ಆರಂಭವಾಗಲಿದ್ದು, ಗಂಭೀರ ವಿಚಾರಗಳು ಇದ್ದರೆ ಮಾತ್ರ ಕಲಾಪಕ್ಕೆ ಹಾಜರಾಗುತ್ತೇನೆ, ಇಲ್ಲವಾದಲ್ಲಿ ಪಕ್ಷ ಸಂಘಟನೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವೆ.ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರವಾಸ ಹಮ್ಮಿಕೊಳ್ಳಲಾಗುವುದು'' ಎಂದು ಹೇಳಿದರು.
ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಜೆಡಿಎಸ್ನಲ್ಲಿ ಪ್ರಜಾಪ್ರಭುತ್ವವಿಲ್ಲ ಎಂದಿರುವ ಬಗ್ಗೆ, ಅದು ಅವರ ಅಭಿಪ್ರಾಯ ಎಂದಷ್ಟೇ ಪ್ರತಿಕ್ರಿಯಿಸಿದರು.
Advertisement