ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಿರುವ ಅತ್ಯಾಚಾರ ಪ್ರಕರಣದ ಆರೋಪ ಪಟ್ಟಿ ಕುರಿತು ವಿಚಾರಣೆ ನಡೆದು ಅಂತಿಮ ತೀರ್ಪು ಹೊರಬೀಳುವ ತನಕ ಪೀಠ ತ್ಯಜಿಸುವುದು ಸೂಕ್ತ ಎಂದು ಕೊಳದಮಠದ ಶಾಂತವೀರ ಮಹಾಸ್ವಾಮೀಜಿ ಸಲಹೆ ನೀಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಐಕ್ಯತೆಗೆ ಶಕ್ತಿ ದೊರಕುವುದು ದೇಶದ ಸಂಸ್ಕೃತಿಯಿಂದ.ಹಾಗಾಗಿ ಧರ್ಮದ ರಕ್ಷಣೆ ಮಾಡಬೇಕಾದ ಮಠಾಧಿಪತಿಗಳು ರಾಷ್ಟ್ರದ ಐಕ್ಯತೆಗೆ ಕುತ್ತು ಬಾರದಂತೆ ನೋಡಿಕೊಳ್ಳಬೇಕು. ಆದರೆ, ಇತ್ತೀಚೆಗೆ ಧಾರ್ಮಿಕ ಕ್ಷೇತ್ರಗಳು ಶಾಂತಿಗೆ ಭಂಗ ತರುವಂತೆ ನಡೆದುಕೊಳ್ಳುತ್ತಿವೆ.ಇದರ ಪರಿಣಾಮವಾಗಿ ಅನೇಕ ಕಡೆ ಧರ್ಮಕ್ಕೆ ಧಕ್ಕೆ ಬರುತ್ತಿವೆ. ಇದಕ್ಕೆ ಸಂಕುಚಿತ ಮನೋಭಾವವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ರಾಮಚಂದ್ರಪುರ ಮಠಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆ ಇದೆ. ಅಲ್ಲದೆ, ಕೊಳದ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಧಾರ್ಮಿಕ ಮುಖಂಡರು ಭಕ್ತರಿಗೆ ಹಾಗೂ ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಆದರೆ, ಈಗಿನ ಮಠಾಧಿಶರ ವಿರುದ್ಧ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಇವರ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಬರುವ ತನಕ ಸ್ಥಾನದಿಂದ ಹೊರ ಬರುವುದೇ ಉತ್ತಮ ಎಂದರು.
ಜನರು ಇಂದಿಗೂ ಧಾರ್ಮಿಕತೆಗೆ ತಗ್ಗಿ-ಬಗ್ಗಿ ನಡೆಯುತ್ತಾರೆ. ಹೀಗಾಗಿ ಗುರುಗಳ ಮಾತಿನ ಮೇಲೆ ನಂಬಿಕೆ ಇಟ್ಟು ನಡೆದುಕೊಳ್ಳುತ್ತಾರೆ. ಆದರೆ, ಭಕ್ತರ ನಂಬಿಕೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತೆ ನಡೆದುಕೊಳ್ಳಬೇಕೇ ಹೊರತು, ಬೇರೆ ರೀತಿ ಉಪಯೋಗಿಸಿಕೊಳ್ಳುವುದು ಖಂಡನೀಯ. ವೈದ್ಯಕೀಯ ವರದಿಗಳು,ದೂರವಾಣಿ ಕರೆಗಳು ರಾಘವೇಶ್ವರ ಸಾಮೀಜಿಗಳ ವಿರುದ್ಧದ ಆರೋಪ ಸಾಬೀತು ಮಾಡುವಂತಿವೆ. ಏನೇ ಆಗಲಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅದೇ ರೀತಿ ನ್ಯಾಯಾಲಯದ ತೀರ್ಪು ಹೊರ
ಬಂದಾಗ ಸತ್ಯಾಸತ್ಯಗಳು ಬಯಲಾಗಲಿವೆ.ಈ ಮೂಲಕ ಜನತೆಯ ಹಾಗೂ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಬೇಕು ಎಂದು ಹೇಳಿದರು.
Advertisement