ಬೆಂಗಳೂರು:ಮಕ್ಕಳ ಹಕ್ಕು ಮತ್ತು ರಕ್ಷಣೆಗೆ ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ನ.20ರಂದು ಬೃಹತ್ ಮಾನವ ಸರಪಳಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ತಿಳಿಸಿದರು.
ವಿಶ್ವ ಮಕ್ಕಳ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಈ ರ್ಯಾಲಿಯಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ. ಕಬ್ಬನ್ಪಾರ್ಕ್ ಕೇಂದ್ರ ಗ್ರಂಥಾಲಯದ ಬಳಿ ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರ್ಯಾಲಿಗೆ ಚಾಲನೆ ನೀಡಲಿದ್ದು, ವಿವಿಧ ಇಲಾಖೆ ಸಚಿವರು ಹಾಗೂ ನಟ ಚೇತನ್ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಬ್ಬನ್ಪಾರ್ಕ್ ಸೆಂಟ್ರಲ್ ಲೈಬ್ರರಿಯಿಂದ ರ್ಯಾಲಿ ಆರಂಭವಾಗಿ, ಕಂಠೀರವ ಕ್ರೀಡಾಂಗಣ, ಎಂ.ಜಿ.- ರೋಡ್, ಚಿನ್ನಸ್ವಾಮಿ ಕ್ರೀಡಾಂಗಣ, ರಾಜಭವನ ರಸ್ತೆ, ಚಾಲುಕ್ಯ ವೃತ್ತ ಹಾಗೂ ವಿಧಾನಸೌಧದ ಮೂಲಕ ಕಬ್ಬನ್ಪಾರ್ಕ್ ತಲುಪಲಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆ, ಹಕ್ಕುಗಳ ರಕ್ಷಣೆ, ಸರ್ವರಿಗೂ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಆಯೋಗ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸಚಿವರಿಗೆ ಪತ್ರ: ಬಹುತೇಕ ಕಡೆ ಶಾಲೆಗಳ ಸಮೀಪವೇ ಮದ್ಯದ ಅಂಗಡಿಗಳಿದ್ದು, ಇವುಗಳನ್ನು ತೆರವುಗೊಳಿಸುವ ಬಗ್ಗೆ ಅಬಕಾರಿ ಸಚಿವರಿಗೆ ಪತ್ರ ಬರೆಯಲಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಸೂಕ್ತ ರಕ್ಷಣೆ, 5-6 ತರಗತಿಯಲ್ಲಿ ಲೈಂಗಿಕ ಶಿಕ್ಷಣ ಅಳವಡಿಕೆ, ಉದ್ಯಾನವನಗಳಲ್ಲಿ ಆಂಬ್ಯುಲೆನ್ಸ್ ಸೇವೆ, ಸಹಾಯವಾಣಿ, ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಆಯೋಗದ ಕಾರ್ಯದರ್ಶಿ ಗಟ್ರೋಡ್ ವೆಗಸ್ ಇದ್ದರು.
Advertisement