ಬೆಂಗಳೂರು: ವಿಶ್ವಪ್ರಸಿದ್ಧ ಮೈಸೂರು, ಶ್ರೀಗಂಧದ ನಾಡು ತನ್ನ ಸುಗಂಧ ಕಳೆದುಕೊಳ್ಳುತ್ತಿದೆ. ಶ್ರಿಗಂಧದ ಪೂರೈಕೆಯಲ್ಲಿ ಭಾರಿ ಕೊರತೆ ಉಂಟಾಗಿರುವ ಕಾರಣ ಮೈಸೂರು ಶ್ರಿಗಂಧದ ತೈಲ ಕಾರ್ಖಾನೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. 1916 ರಲ್ಲಿ ಸ್ಥಾಪಿತವಾದ ಈ ಕಾರ್ಖಾನೆ ಹಿಂದೆಂದೂ ಇಂತಹ ಸಮಸ್ಯೆ ಎದುರಿಸಿದ್ದಿಲ್ಲ. ಆದರೆ, ಈಗ ಗಂಧದ ಕೊರತೆಯಿಂದಾಗಿ ಏಪ್ರಿಲ್ ವರೆಗೆ ಕಾರ್ಖಾನೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯ ಶತಮಾನೋತ್ಸವ ಸಮಯದಲ್ಲೇ ಇಂತಹ ಸಮಸ್ಯೆ ಎದುರಾಗಿದ್ದು, ಸುಮಾರು ಐದಾರು ತಿಂಗಳುಗಳ ಕಾಲ ಕಾರ್ಖಾನೆ ಮುಚ್ಚಲಿದೆ. ಪ್ರಸ್ತುತ ಇರುವ 2,800 ಕೆ.ಜಿ. ಶ್ರೀಗಂಧದ ಎಣ್ಣೆಯನ್ನು ಡಿಸೆಂಬರ್ ತಿಂಗಳವರೆಗೆ ಮಾತ್ರ ಬಳಸಬಹುದು. ಆನಂತರದ ಉತ್ಪಾದನೆಗೆ ಬೇಕಾದ ಕಚ್ಚಾವಸ್ತು ಕಾರ್ಖಾನೆಯಲ್ಲಿಲ್ಲ. ಈಗಾಗಲೇ ಗಂಧದ ಎಣ್ಣೆ ತಯಾರು ಮಾಡುವ ಘಟಕಕ್ಕೆ ಬೀಗ ಹಾಕಲಾಗಿದೆ. ಮುಂದಿನ ನಾಲ್ಕು ತಿಂಗಳಿಗೆ ಆಗುವಷ್ಟು ಎಣ್ಣೆಯನ್ನು ತಯಾರು ಮಾಡಲು ಅಗತ್ಯವಿರುವಷ್ಟು ಗಂಧವನ್ನು ಸಿದ್ದ- ಪಡಿಸಲಾಗುತ್ತಿದೆ ಎಂದು ಕೆಎಸ್ ಡಿಎಲ್ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ. ಸುವರ್ಣ ಕುಮಾರ್ ತಿಳಿಸಿದ್ದಾರೆ.