ಕಲಾಪದಲ್ಲಿ ಅಡಿ ಆಲಾಪ

ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಪದಚ್ಯುತಿಗೆ ಪೂರಕ ಪ್ರಕ್ರಿಯೆಗಳು ಆರಂಭವಾಗಿದ್ದರೆ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಅಡಿ...
ನ್ಯಾಯಮೂರ್ತಿ ಸುಭಾಷ್ ಅಡಿ
ನ್ಯಾಯಮೂರ್ತಿ ಸುಭಾಷ್ ಅಡಿ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಪದಚ್ಯುತಿಗೆ ಪೂರಕ  ಪ್ರಕ್ರಿಯೆಗಳು ಆರಂಭವಾಗಿದ್ದರೆ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಪದಚ್ಯುತಿಗೆ  ಆಡಳಿತಾರೂಢ ಕಾಂಗ್ರೆಸ್ ಸಲ್ಲಿಸಿರುವ ಪ್ರಸ್ತಾವ ಇನ್ನೂ ವಿಧಾನಸಭಾಧ್ಯಕ್ಷ ಕಾಗೋಡು  ತಿಮ್ಮಪ್ಪ ಅವರ ಪರಿಶೀಲನೆಯಲ್ಲೇ ಉಳಿದಿದೆ.

ಈ ಮಧ್ಯೆ ಬುಧವಾರ ನ್ಯಾ.ಸುಭಾಷ್ ಅಡಿ ಪದಚ್ಯುತಿ ಪ್ರಸ್ತಾವ ವಿಚಾರ ಮತ್ತೆ ಸದನದಲ್ಲಿ ಪ್ರತಿಧ್ವನಿಸಿ ಪ್ರತಿಪಕ್ಷ ಬಿಜೆಪಿ ಧರಣಿ ನಡೆಸಿತು. ಈ ಸಂದರ್ಭದಲ್ಲಿ ಸ್ಪೀಕರ್ ಕಾಗೋಡು  ತಿಮ್ಮಪ್ಪ  ಅವರು ಪ್ರಸ್ತಾವ ವಿಚಾರವನ್ನು ಪರಿಶೀಲಿಸುತ್ತೇನೆ ಎಂದು ಹೇಳಿದರೇ ವಿನಾ ಅದನ್ನು ``ಸಂಪೂರ್ಣ  ಒಪ್ಪಿದ್ದೇನೆ,'' ಎಂದು ಹೇಳಲಿಲ್ಲ. ಅಲ್ಲದೆ, ಉಪಲೋಕಾಯುಕ್ತರ  ಪದಚ್ಯುತಿಗೆ ಸದನದಲ್ಲಿ ಪ್ರಸ್ತಾವವಾಗಿದ್ದರೂ, ನ್ಯಾ.ಅಡಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರ ವಿರುದ್ಧ   ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು.

ಉಪ ಲೋಕ ಗದ್ದಲ: ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ  ದಿನ ಬಾವಿಗಿಳಿದು ಪ್ರತಿಭಟಿಸಿದರು. ``ನ್ಯಾ.ಸುಭಾಷ್ ಅಡಿ ವಿರುದ್ಧದ ಸಲ್ಲಿಸಿರುವ ಗೊತ್ತುವಳಿ ಪ್ರಸ್ತಾವವನ್ನು ವಾಪಸ್ ತೆಗೆದುಕೊಳ್ಳಬೇಕು,'' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಒತ್ತಾಯಿಸಿದರು.

ನ್ಯಾ. ಅಡಿ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಲ್ಲ. ಆದರೂ ಅವರ ಪದಚ್ಯುತಿಗೆ ಕಾಂಗ್ರೆಸ್  ಪ್ರಯತ್ನಿಸಿದೆ. ಈ ಮೂಲಕ ಸರ್ಕಾರ ಲೋಕಾಯುಕ್ತವನ್ನೇ ಮುಚ್ಚಲು ಹೊರಟಿದೆ. ಪ್ರತಿಪಕ್ಷಗಳು   ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಪದಚ್ಯುತಿಗೆ ಗೊತ್ತುವಳಿ ಮಂಡಿಸಿದ್ದಕ್ಕೆ ಸೇಡಿನ ಕ್ರಮವಾಗಿ  ಕಾಂಗ್ರೆಸ್ ಕೂಡ  ಉಪ ಲೋಕಾಯುಕ್ತರ ಪದಚ್ಯುತಿಗೆ ಮುಂದಾಗಿದೆ. ಇದು ಸರಿಯಲ್ಲ. ಇದರಿಂದ  ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಅವರ ತೇಜೋವಧೆ ಮಾಡಿ ದಂತಾಗಿದೆ ಎಂದು  ಸಿಟ್ಟಿನಿಂದ ಹೇಳಿದರು. 

ಕೋರ್ಟ್ ಕಲಾಪ ಬಹಿಷ್ಕಾರದ ಎಚ್ಚರಿಕೆ
ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಅವರನ್ನು ಪದಚ್ಯುತಗೊಳಿಸಿದರೆ ರಾಜ್ಯಾದ್ಯಂತ  ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಲಾಗುವುದು.ಸರ್ಕಾರ ಈ ಪ್ರಕ್ರಿಯೆ ಕೈ ಬಿಡಬೇಕು ಎಂದು  ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ  ಎ.ಆರ್ ಪಾಟೀಲ್ ಎಚ್ಚರಿಸಿದ್ದಾರೆ.

ಅಡಿ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. ಬಿಜೆಪಿ ವಿರುದ್ಧದ ಸೇಡಿನ ಕ್ರಮವಾಗಿ  ಕಾಂಗ್ರೆಸ್ ಅಡಿ ಪದಚ್ಯುತಿಗೆ ಯತ್ನಿಸಿದೆ. ಇದರಿಂದ ಅವರ ತೇಜೋವಧೆಯಾಗಿದೆ. ಇದು  ಖಂಡನೀಯ
●ಜಗದೀಶ್ ಶೆಟ್ಟರ್ ಪ್ರತಿಪಕ್ಷ ನಾಯಕ

ನ್ಯಾ. ಸುಭಾಷ್ ಅಡಿ ಅವರ ತೇಜೋವಧೆ ಆಗಿದೆ ಎಂಬುದು ಸರಿಯಲ್ಲ. ಪದಚ್ಯುತಿಗೆ ಪ್ರಸ್ತಾವ  ಸಲ್ಲಿಕೆಯಾಗಿರುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡಿರುವುದು ಸಂಸ್ಕೃತಿಯೇ?
● ಕಾಗೋಡು ತಿಮ್ಮಪ್ಪ ವಿಧಾನಸಭೆ ಸ್ಪೀಕರ್

ನ್ಯಾ. ಸುಭಾಷ್ ಅಡಿ ಪದಚ್ಯುತಿ ವಿಚಾರವಾಗಿ ಸ್ಪೀಕರ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆಯಿಂದಲೂ ಮಾಹಿತಿ ಪಡೆಯುತ್ತಾರೆ. ಈ ಎಲ್ಲಾ ಮಾಹಿತಿಗಳಿಂದ  ದಚ್ಯುತಿ ಗೊತ್ತುವಳಿಯಲ್ಲಿ ಸತ್ಯಾಂಶ ಇದೆ ಎಂದು ಭರವಸೆ ಮೂಡಿದರೆ ಮಾತ್ರ ಕಾಂಗ್ರೆಸ್‍ನ ಪ್ರಸ್ತಾವ ಒಪ್ಪಿಕೊಳ್ಳುತ್ತಾರೆ.
●ಟಿ ಬಿ ಜಯಚಂದ್ರ ಕಾನೂನು ಸಚಿವ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com