ಬೆಂಗಳೂರು: ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳನ್ನು ನಿಯಂತ್ರಿಸಲು ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ ವೃತ್ತಿಪರ ಸರಗಳ್ಳರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲು ಚಿಂತನೆ ನಡೆಸಿದೆ.
ಪದೇಪದೆ ಸರಗಳ್ಳತನ ಮಾಡಿ ಸಿಕ್ಕಿಹಾಕಿಕೊಳ್ಳುವ ವೃತ್ತಿಪರ ಕಳ್ಳರ ವಿರುದ್ಧ ಗೂಂಡಾ ಕಾಯ್ಕೆ ಬಳಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರಗಳ್ಳರ ವಿರುದ್ಧದ ಕಾನೂನು ಅಷ್ಟೇನು ಪ್ರಬಲವಾಗಿಲ್ಲ. ಹೀಗಾಗಿ ಅವರಿಗೆ ಬೇಗ ಜಾಮೀನು ಸಿಗುತ್ತದೆ. ಪೊಲೀಸರು ಎಷ್ಟೇ ಕ್ರಮ ತೆಗೆದುಕೊಂಡರು ಕಳ್ಳರು ಜಾಮೀನು ಪಡೆದು ಮತ್ತೆ ಕಳ್ಳತನ ಮಾಡುತ್ತಾರೆ. ಹೀಗಾಗಿ ಕಾನೂನು ಬಲಪಡಿಸುವ ಅಗತ್ಯ ಇದೆ ಎಂದರು.
ಸರಗಳ್ಳರ ವಿರುದ್ಧ ಕಠಿಣ ಕಾನೂನು ರೂಪಿಸಲು ವಿಧಾನ ಮಂಡಲದಲ್ಲಿ ಚರ್ಚಿಸಿ ಕಾನೂನು ಬಲಗೊಳಿಸಬೇಕಿದೆ ಎಂದು ಸಚಿವರು ಹೇಳಿದರು.
Advertisement