ಕಲಬುರ್ಗಿ ಹತ್ಯೆ: ಆರು ಲೇಖಕರಿಂದ ಪ್ರಶಸ್ತಿ ವಾಪಸ್?

ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹಂತಕರನ್ನು ಪತ್ತೆ ಹಚ್ಚುವಲ್ಲಿ ವಿಫಲವಾದ ಸರ್ಕಾರದ ಕ್ರಮ ಖಂಡಿಸಿ ಹಿರಿಯ ಸಾಹಿತಿ ಪ್ರೊ.ಚಂಪಾ...
ಕಲಬುರ್ಗಿ
ಕಲಬುರ್ಗಿ

ಬೆಂಗಳೂರು: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹಂತಕರನ್ನು ಪತ್ತೆ ಹಚ್ಚುವಲ್ಲಿ ವಿಫಲವಾದ ಸರ್ಕಾರದ ಕ್ರಮ ಖಂಡಿಸಿ ಹಿರಿಯ ಸಾಹಿತಿ ಪ್ರೊ.ಚಂಪಾ ಅವರು ಪ್ರಶಸ್ತಿ ವಾಪಸ್ ಮಾಡಿದ ಬೆನ್ನಲ್ಲೆ, ಮತ್ತೆ ಆರು ಮಂದಿ ಯುವ ಲೇಖಕರು ತಮಗೆ ಬಂದಿರುವ ಪ್ರಶಸ್ತಿಯನ್ನು ಹಿಂದಿರುಗಿಸಲು ಮುಂದಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು 2010ನೇ ಸಾಲಿನಲ್ಲಿ ನೀಡಿದ `ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅರಳು ಸಾಹಿತ್ಯ ಪ್ರಶಸ್ತಿ' ಪುರಸ್ಕೃತರಾದ ವೀರಣ್ಣ ಮಡಿವಾಳರ-ಬೆಳಗಾವಿ, ಟಿ. ಸತೀಶ್ ಜವರೇಗೌಡ- ಮಂಡ್ಯ, ಸಂಗಮೇಶ ಮೆಣಸಿನ-ಕಾಯಿ-ಧಾರವಾಡ, ಹನಮಂತ ಹಾಲಿಗೇರಿ-ಬಾಗಲಕೋಟೆ, ಶ್ರೀದೇವಿ ವಿ. ಆಲೂರ-ಬಳ್ಳಾರಿ ಹಾಗೂ ಚಿದಾನಂದ ಸಾಲಿ- ರಾಯಚೂರು ಇವರೇ ಪ್ರಶಸ್ತಿ ವಾಪಸ್ ನೀಡಲು ಚಿಂತಿಸಿದ್ದಾರೆ.

ಈ ಸಂಬಂಧ ಅಕ್ಟೋಬರ್ 3ರ ಬೆಳಗ್ಗೆ 11 ಗಂಟೆಗೆ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣದಲ್ಲಿ ಇದುವರೆಗೆ ದುಷ್ಕರ್ಮಿಗಳ ಬಂಧನವಾಗದಿರುವುದನ್ನು ಖಂಡಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲಿಕ ಹಾಲಂಬಿ ಅವರಿಗೆ ವಾಪಸ್ ಮಾಡಲಿದ್ದಾರೆ.

`ನಮಗೆ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲೇ ಡಾ. ಕಲಬುರ್ಗಿ ಅವರಿಗೆ ಕಸಾಪ ನೃಪತುಂಗ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಈಗ ಕಸಾಪ ಮೂಲಕ ಸರ್ಕಾರದ ಮೇಲೆ ಒತ್ತಡ ವ್ಯಕ್ತಪಡಿಸುವ ಉದ್ದೇಶ ನಮ್ಮದು' ಎಂದು ಈ ಆರು ಮಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ವಾಪಸ್ ಮಾಡುವ ಸಂದರ್ಭದಲ್ಲಿ ಹಿರಿಯ ಸಾಹಿತಿ ಚಂಪಾ ಸಮ್ಮುಖ ವಹಿಸುವರೆಂದಿದ್ದಾರೆ.

ನಾಳೆ ಸಭೆ: ಈ ಮಧ್ಯೆ ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮಾನವಧರ್ಮ ಪೀಠದ ನಿಡುಮಾಮಿಡಿ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಅಕ್ಟೋಬರ್ 4 ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಭೆ ಕರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com