ಬೆಂಗಳೂರು: ನಗರದ ದಕ್ಷಿಣ ವಲಯದಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ವಹಿಸಿದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಜಯನಗರ 7 ನೇ ಹಂತ ಕನಕಪುರ ರಸ್ತೆ ಹುಣಸೇಮರ, ಬನಶಂಕರಿ ಬಸ್ ನಿಲ್ದಾಣ, ಕರಿಸಂದ್ರ, ಯಾರಬ್ ನಗರ, ಗಣೇಶ ಮಂದಿರ, ಎನ್.ಆರ್ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಚಿವರು ಪರಿಶೀಲನೆ ನಡೆಸಿದರು. ಜಯನಗರ 7 ನೇ ಹಂತದಲ್ಲಿ ರಸ್ತೆ ಬದಿಯಲ್ಲೇ ಮದ್ಯದ ಬಾಟಲಿ ಕಸದ ರಾಶಿ ಕಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರ ಚನ್ನಕೇಶವ ಎಂಬುವವರಿಗೆ ಸ್ಥಳದಲ್ಲೇ ಕರೆ ಮಾಡಿ, ನ್ಯಾಯಯುತವಾಗಿ ಸಂಪಾದನೆ ಮಾಡುವುದಾದರೆ ಗುತ್ತಿಗೆ ಪಡೆಯಿರಿ ಎಂದು ಎಚ್ಚರಿಸಿದರು. ಗುತ್ತಿಗೆದಾರನಿಗೆ ರೂ.50 ಸಾವಿರ ದಂಡ ಹಾಕಲು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.
ಹುಣಸೇಮರ ಬಳಿ ಸಾರ್ವಜನಿಕರೇ ಸಚಿವರಿಗೆ ಸಮಸ್ಯೆಗಳನ್ನು ಹೇಳಿಕೊಂಡರು. ಬನಶಂಕರಿ ನಿಲ್ದಾಣದಲ್ಲಿ ಕಸದ ಸಮಸ್ಯೆಯನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಸ ಸಮಸ್ಯೆಯತ್ತ ಗಮನ ಹರಿಸದ ತಪ್ಪಿಗೆ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭಾಸ್ಕರ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಜಯದೇವ ಅವರನ್ನು ಅಮಾನತು ಮಾಡಿ ಆದೇಶಿಸಿದರು. ಮತ್ತೊಬ್ಬ ಅಧಿಕಾರಿ ಮುದ್ದರಾಜುಗೆ ನೊಟೀಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬನಶಂಕರಿ ಬಸ್ ನಿಲ್ದಾಣದಲ್ಲಿ ಉತ್ತರಹಳ್ಳಿಯಿಂದ ಬರುವ ಬಸ್ ಗಳಿಂದ ಸಮಸ್ಯೆಯಾಗುತ್ತಿದೆ. ನಿಲ್ದಾಣದ ಹಿಂದಿರುವ ಜಲಮಂಡಳಿ ಕಚೇರಿ ಮೂಲಕ ಬಸ್ ಗಳು ನೇರವಾಗಿ ಹೋಗುವಂತೆ ಮಾಡಬೇಕು ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವರು ಒಂದು ದಿನದಲ್ಲಿ ಸಮಸ್ಯೆ ಸರಿಪಡಿಸಲಾಗುವುದು ಎಂದು ತಿಳಿಸಿದರು.
Advertisement