ಮಳೆ ಕೈ ಕೊಟ್ಟು ಬರಗಾಲ ಆವರಿಸಿದಾಗ ಮತ್ತು ಹೆಚ್ಚು ಮಳೆ ಸುರಿದು ಬೆಳೆಗಳು ಕೊಚ್ಚಿ ಹೋದಾಗ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ರೈತರಿಗೆ ನೆರವಾಗಲಿ ಎಂಬ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಪಶುಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.
ಕೃಷಿಯನ್ನು ಮಾತ್ರ ಅವಲಂಬಿಸಿರುವ ರೈತರಿಗೆ ಈ ಯೋಜನೆ ವರದಾನವಾಗಿದೆ. ಕೃಷಿ ನಷ್ಟದಿಂದಾಗುವ ಸಮಸ್ಯೆಗಳನ್ನು ಎದುರಿಸಲು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬದುಕನ್ನು ಕಂಡುಕೊಳ್ಳಲು ರೈತನಿಗೆ ಪಶುಭಾಗ್ಯ ಯೋಜನೆ ಸಹಕಾರಿಯಾಗಲಿದೆ.
ಪಶು ಸಂಗೋಪನೆ, ಹೈನುಗಾರಿಕೆಯಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದಾಗಿದೆ. ಪಶು ಸಾಕಾಣಿಕೆ ಮಾಡುವ ರೈತರಿಗೆ ನೆರವು ಮತ್ತು ಉತ್ತೇಜನವನ್ನು ನೀಡಲು ಪಶುಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ.
ಪಶುಭಾಗ್ಯ ಯೋಜನೆಯಡಿ ಸಣ್ಣ, ಅತಿಸಣ್ಣ ರೈತರಿಗೆ ಪಶು ಸಾಕಾಣಿಕೆಗಾಗಿ ವಾಣಿಜ್ಯ ಬ್ಯಾಂಕ್ಗಳಿಂದ ಗರಿಷ್ಠ 1.20 ಲಕ್ಷ ರೂ.ಗಳ ವರೆಗೆ ಸಾಲ ಒದಗಿಸಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.50 ಹಾಗೂ ಇತರೆ ಜನಾಂಗದವರಿಗೆ ಶೇ.25ರಷ್ಟು ಬ್ಯಾಂಕ್ ಸಹಾಯಧನ ನೀಡಲಾಗುತ್ತದೆ .
ಜಿಲ್ಲೆಗಳಲ್ಲಿ ಪಶುಭಾಗ್ಯ ಯೋಜನೆಯಡಿ ಅತಿ ಹಿಂದುಳಿದ ಮತ್ತು ಹಿಂದುಳಿದ ತಾಲೂಕುಗಳಿಗೆ 478 ಘಟಕ ಸ್ಥಾಪಿಸಲು 1.66 ಕೋಟಿ ರೂ.ಗಳ ಅನುದಾನ ನಿಗದಿಯಾಗಿದೆ.
ಅದೇ ರೀತಿ 166 ಹಸು /ಎಮ್ಮೆ ಹಾಲು ಉತ್ಪಾದನಾ ಘಟಕಗಳಿಗಾಗಿ 56.70 ಲಕ್ಷ ರೂ., 292 ಕುರಿ/ಮೇಕೆ ಸಾಕಾಣಿಕೆ ಘಟಕಗಳಿಗಾಗಿ 10.12 ಲಕ್ಷ ರೂ. ನಿಗದಿಪಡಿಸಲಾಗಿದೆ. 164 ಹಂದಿ ಸಾಕಾಣಿಕೆ ಘಟಕಗಳಿಗಾಗಿ 43.97 ಲಕ್ಷ ರೂ., 40 ಕೋಳಿ ಸಾಕಾಣಿಕೆ ಘಟಕಗಳಿಗಾಗಿ 19.45ಲಕ್ಷ ರೂ. ಹಾಗೂ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು 100 ಘಟಕಗಳಿಗಾಗಿ 5.07 ಲಕ್ಷ ರೂ. ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
Advertisement