ಬೆಂಗಳೂರು: ಫೇಸ್ಬುಕ್ನಲ್ಲಿ ಅಶ್ಲೀಲ, ನಿಂದನಾತ್ಮಕ, ಕೋಮು ಪ್ರಚೋದಕ ಸಂದೇಶಗಳು ಹಾಗೂ ಲೈಂಗಿಕ ದೌರ್ಜನ್ಯ,ಕೊಲೆ, ದೈಹಿಕ ಹಲ್ಲೆಗೆ ಪ್ರಚೋದನೆ ನೀಡುವ ಪೋಸ್ಟ್ ಗಳನ್ನು ಹಾಕಿದ್ದ ಮಧುಸೂದನಗೌಡ ಎಂಬಾತನ ವಿರುದ್ಧ ಪತ್ರಕರ್ತೆ ಚೇತನಾ ತೀರ್ಥಹಳ್ಳಿ ಹನುಮಂತನಗರ ಠಾಣೆಗೆ ದೂರು ನೀಡಿದ್ದಾರೆ. ತಾವು ಹೊಂದಿರುವ ಅಲಾವಿಕಾ ಹೆಸರಿನ ಫೇಸ್ ಬುಕ್ ಅಕೌಂಟ್ಗೆ ಮೇಲಿಂದ ಮೇಲೆ ಸಹಿಸಲಸಾದ್ಯವಾದ ಭಾಷೆಯಲ್ಲಿ ಸಂದೇಶಗಳು ಬರುತ್ತಿವೆ. ಎಲೆಕ್ಟ್ರಿಷಿಯನ್ ಆಗಿರುವ ಮಧುಸೂದನಗೌಡ ಎಂಬಾತ ವೈಯಕ್ತಿಕ ಭಾವನೆಗಳನ್ನು ನೋಯಿಸುವ, ಕೋಮುಭಾವನೆ ಕೆರಳಿಸುವ,ದೈಹಿಕ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯದ ಭೀತಿ ಉಂಟು ಮಾಡುತ್ತಿದ್ದಾನೆ. ಅಲ್ಲದೇ, ಬರೆಯುವ ಹಕ್ಕನ್ನು ಕಿತ್ತುಕೊಳ್ಳುವ ಆತನ ಹುನ್ನಾರ ಮಾನಸಿಕ ಹಿಂಸೆ ಉಂಟು ಮಾಡಿದೆ ಎಂದು ಚೇತನಾ ದೂರಿನಲ್ಲಿ ತಿಳಿಸಿದ್ದಾರೆ.
ಜಾಗೃತ ಭಾರತ ಹೆಸರಿನ ನಕಲಿ ಖಾತೆಯಿಂದಲೂ ಅಶ್ಲೀಲ ಸಂದೇಶಗಳು ಬರುತ್ತಿವೆ. ನಕಲಿ ಫೇಸ್ ಬುಕ್ ಖಾತೆ ತೆರೆದು ನನ್ನನ್ನು ಅವಮಾನಕಾರಿಯಾಗಿ ಬಳಸಲಾಗಿದೆ. ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಾ ಭೀತಿ ಮೂಡಿಸುತ್ತಿರುವ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಚೇತನಾ ಹೇಳಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಎಫ್ ಐರ್ ದಾಖಲಾಗಿದೆ.
Advertisement