ಬಳ್ಳಾರಿ/ ಮೈಸೂರು: ಕಲಬುರ್ಗಿ ಅವರ ಹತ್ಯೆ ಬಗ್ಗೆ ರಾಜ್ಯದಲ್ಲೂ ಸಾಹಿತ್ಯ ವಲಯ ಸಿಡಿದೇಳಲು ಪ್ರಾರಂಭಿಸಿದೆ. ಈಗ ಹಿರಿಯ ಸಾಹಿತಿಗಳಿಬ್ಬರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಕುಂ. ವೀರ ಭದ್ರಪ್ಪ, ಸಾಹಿತಿ, ಹಿರಿಯ ಪತ್ರಕರ್ತ ಜಿ. ಎನ್.ರಂಗನಾಥ ರಾವ್ ತಮ್ಮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಲು ನಿರ್ಧರಿಸಿದ್ದರೆ, ಪ್ರೊ. ಅರವಿಂದ ಮಾಲಗತ್ತಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಭಾನುವಾರದ ಕನ್ನಡಪ್ರಭದಲ್ಲಿ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ಅವರ ಸಂದರ್ಶನ ಪ್ರಕಟವಾಗಿತ್ತು. ಅದರಲ್ಲಿ ಅವರು ಸಾಹಿತಿಗಳ ನಿರ್ಲಿಪ್ತತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಒಂದು ವಿಡಂಬ ನಾತ್ಮಕ ಲೇಖನ ಕೂಡ ಪ್ರಕಟವಾಗಿತ್ತು. ಅವುಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಪ್ರಗತಿಪರ ಲೇಖಕರ ಮೇಲಾಗುತ್ತಿರುವ ದಾಳಿ, ದಬ್ಬಾಳಿಕೆ ವಿರೋಧಿಸಿ, ಈ ನಿಲುವು ತೆಗೆದುಕೊಂಡಿರುವುದಾಗಿ ಕುಂ. ವೀರಭದ್ರಪ್ಪ `ಕನ್ನಡಪ್ರಭ'ಕ್ಕೆ ತಿಳಿಸಿದರು.