ನರಗುಂದ: ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಂದಿರಿಗೆ ನೀಡಲಾಗುವ ವಿಧವಾ ವೇತನವನ್ನು ಮಾಸಿಕ 500 ರೂ.ಗಳಿಂದ 2 ಸಾವಿರ ರೂ.ಗೆ ಹೆಚ್ಚಳ ಮಾಡಿದ್ದು ಸ್ವಾಗತಾರ್ಹ. ಇದನ್ನು ರಾಜ್ಯದ ಎಲ್ಲ ವಿಧವೆಯರಿಗೂ ವಿಸ್ತರಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಳ್ಳಾರಿಯಿಂದ ನರಗುಂದದವರೆಗೆ ಬಿಜೆಪಿ ಹಮ್ಮಿಕೊಂಡಿದ್ದ ಎರಡನೇ ಹಂತದ ರೈತ ಚೈತನ್ಯ ಯಾತ್ರೆ ಸಮಾರೋಪ ಸಮಾರಂಭವನ್ನು ನರಗುಂದದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ 14.81 ಲಕ್ಷ ವಿಧವೆಯರು ಮಾಸಿಕ 500 ರೂ. ವಿಧವಾ ವೇತನ ಪಡೆಯುತ್ತಿದ್ದು, ಅವರೆಲ್ಲಾ ಅಕ್ಷರಶಃ ಬೀದಿಗೆ ಬಂದಿದ್ದಾರೆ. ಇವರೆಲ್ಲರಿಗೂ ವೇತನವನ್ನು 2,000 ರೂ.ಗೆ ಏರಿಸಬೇಕು. ಇಲ್ಲವಾದಲ್ಲಿ ರೈತ ಚೈತನ್ಯ ಯಾತ್ರೆಯನ್ನೂ ಮೀರಿಸುವಂತೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಇನ್ನು ಎರಡು ವರ್ಷಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿದ್ದೆ ಮಾಡಲು ಬಿಡುವುದಿಲ್ಲ. ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಸಂಕಲ್ಪ ತೊಟ್ಟಿದ್ದೇವೆ. ಹಳ್ಳಿ, ಹಳ್ಳಿಗಳಲ್ಲಿ ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಯುತ್ತದೆ ಎಂದು ಕಿಡಿಕಾರಿದರು.
Advertisement