ಬೆಂಗಳೂರು: ಮಂಡ್ಯಕ್ಕೆ ಇತ್ತೀಚೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದ ವೇಳೆ ಚೆಕ್ ನೀಡಿರುವ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೆಕ್ ವಿಷಯದಲ್ಲಿ ಅನಗತ್ಯ ವಾದ-ವಿವಾದ ಎಬ್ಬಿಸಲಾಗುತ್ತಿದೆ. ಮೃತ ರೈತ ಲೋಕೇಶ್ ನ ಕುಟುಂಬ ಚೆಕ್ ನ್ನು ಮತ್ತೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.
ಮಾಜಿ ಸಂಸದೆ ರಮ್ಯಾ ಅವರು ಸಂಸದ ಪುಟ್ಟರಾಜು ಬಳಿ ಕ್ಷಮೆ ಕೇಳಿದರೆ ಮಾತ್ರ ಕೆಪಿಸಿಸಿ ಚೆಕ್ ಅನ್ನು ಸ್ವೀಕರಿಸುವುದಾಗಿ ಲೋಕೇಶ್ ಪತ್ನಿ ಶೋಭಾ ಹೇಳಿದ್ದರು. ಅಷ್ಟೇ ಅಲ್ಲ ಚೆಕ್ ವಾಪಸ್ ಪಡೆದು ಮೂರು ದಿನ ಕಳೆದರೂ ಹಿಂದಿರುಗಿ ಕುಟುಂಬಕ್ಕೆ ನೀಡದ್ದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು, ಕೆಪಿಸಿಸಿ ನೀಡುವ 1 ಲಕ್ಷ ರೂಪಾಯಿ ನಮಗೆ ಬೇಡ, ನಾವು ಸ್ವಾಭಿಮಾನಿಗಳು, ಮೃತ ಲೋಕೇಶ್ ಕುಟುಂಬಕ್ಕೆ ಕೆಪಿಸಿಸಿ ನೀಡುವ 1 ಲಕ್ಷ ರೂಪಾಯಿ ಮೊತ್ತವನ್ನು ನಾವೇ ಚಂದಾ ಎತ್ತಿ ಕೊಡುವುದಾಗಿ ಹೇಳಿದ್ದರು.
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಪಾಂಡವಪುರ ತಾಲೂಕಿನ ಸಣಬದಕೊಪ್ಪಲಿನ ರೈತ ಲೋಕೇಶ್ ಕುಟುಂಬಕ್ಕೆ ಕೆಪಿಸಿಸಿಯಿಂದ ನೀಡಿದ ಪರಿಹಾರ ಚೆಕ್ ಮೊನ್ನೆ ರಾಹುಲ್ ಗಾಂಧಿ ನೀಡಿದ್ದರು. ಆದರೆ ಅದು ರಾಜಕೀಯ ನಾಯಕರ ರಾಜಕಾರಣಗಳಿಂದಾಗಿ ಪುನಹ ಕೆಪಿಸಿಸಿ ಕಚೇರಿಗೆ ವಾಪಾಸಾಗಿದೆ.
Advertisement