ಅಕ್ರಮ ವಸೂಲಿ ಪತ್ತೆ ಹಚ್ಚಿದ್ದ ಆರ್.ಟಿ.ಐ ಕಾರ್ಯಕರ್ತನಿಗೆ ಬಹುಮಾನ

ಮಿತಿ ಮೀರಿದ ಟೋಲ್ ವಸೂಲಿ ಮಾಡುತ್ತಿದ್ದನ್ನು ಬಯಲು ಮಾಡಿದ ಆರ್.ಟಿ.ಐ ಕಾರ್ಯಕರ್ತರೋಬ್ಬರಿಗೆ ಎನ್.ಹೆಚ್.ಎ.ಐ ರೂ 10 ಸಾವಿರ ನಗದು ಬಹುಮಾನ ನೀಡಲು ಮುಂದಾಗಿದೆ.
ಆರ್.ಟಿ.ಐ ಕಾರ್ಯಕರ್ತನಿಗೆ ಎನ್.ಹೆಚ್.ಎ.ಐ ನಿಂದ ಬಹುಮಾನ(ಸಂಗ್ರಹ ಚಿತ್ರ)
ಆರ್.ಟಿ.ಐ ಕಾರ್ಯಕರ್ತನಿಗೆ ಎನ್.ಹೆಚ್.ಎ.ಐ ನಿಂದ ಬಹುಮಾನ(ಸಂಗ್ರಹ ಚಿತ್ರ)

ನವದೆಹಲಿ: ಮಿತಿ ಮೀರಿದ ಟೋಲ್ ವಸೂಲಿ ಮಾಡುತ್ತಿದ್ದನ್ನು ಬಯಲು ಮಾಡಿದ ಆರ್.ಟಿ.ಐ ಕಾರ್ಯಕರ್ತರೋಬ್ಬರಿಗೆ ಎನ್.ಹೆಚ್.ಎ.ಐ ರೂ 10 ಸಾವಿರ ನಗದು ಬಹುಮಾನ ನೀಡಲು ಮುಂದಾಗಿದೆ. ಅಂದಹಾಗೆ ಇಂತಹ ಬಹುಮಾನಕ್ಕೆ ಪಾತ್ರರಾಗಿರುವುದು ಬೆಳಗಾವಿಯ ಪ್ರಶಾಂತ್ ಅಶೋಕ್ ಬುರ್ಗೆ.
2013 ರಲ್ಲಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳುವ ಗಡಿ ಭಾಗದ ಟೋಲ್ ನಲ್ಲಿ ಹೆಚ್ಚು ಹಣ ವಸೂಲು ಮಾಡುತ್ತಿದ್ದನ್ನು ಪ್ರಶಾಂತ್ ಆರ್.ಟಿ.ಐ ಮೂಲಕ ಪತ್ತೆ ಹಚ್ಚಿದ್ದರು. ಕಾರು ಜೀಪು ಮತ್ತು ವ್ಯಾನುಗಳಿಗೆ ಹಾಡು ಹೋಗಲು ಮತ್ತು ವಾಪಸ್ ಬರಲು ಕ್ರಮವಾಗಿ ದರ ರೂ.15 ಮತ್ತು 35 ನಿಗದಿಯಾಗಿದ್ದರೂ ಅಲ್ಲಿ ರೂ 20 , 40 ವಸೂಲು ಮಾಡಲಾಗುತ್ತಿತ್ತು.
ಮಾಹಿತಿ ಹಕ್ಕಿನ ಮೂಲಕ ಅವರು ನಿಗದಿತ ಟೋಲ್ ದರ ಪತ್ತೆ ಹಚ್ಚಿದ್ದರು. ಪ್ರಾಧಿಕಾರ ತಕ್ಷಣವೇ ಕ್ರಮ ಕೈಗೊಂಡು ಹೆಚ್ಚುವರಿ ಟೋಲ್  ದರ ವಸೂಲಿಗೆ ತಡೆಯೊಡ್ಡಿತ್ತು. ಅಷ್ಟೇ ಅಲ್ಲ ಹೆಚ್ಚುವರಿ ಟೋಲ್ ವಸೂಲು ಮಾಡಿದ ಮೊತ್ತ 1.8  ಕೋಟಿಯನ್ನು ಟೋಲ್ ಏಜೆನ್ಸಿ ಮೆಸರ್ಸ್ ಕೋನಾರ್ಕ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಿಂದ ವಸೂಲು ಮಾಡಿತ್ತು. ಹೆಚ್ಚುವರಿ ನೀಡಿದ ಗ್ರಾಹಕರಿಗೆ ಹಣ ವಾಪಸು ಮಾಡಿತ್ತು. ಜತೆಗೆ ಟೋಲ್ ಬಳಿ ದೊಡ್ಡದಾಗಿ ದರ ಪಟ್ಟಿ ಹಾಕಲಾಗಿತ್ತು. ಪ್ರಶಾಂತ್ ಆರ್.ಟಿ.ಐ ಮೂಲಕ ಪಡೆದ ಮಾಹಿತಿ ಆಧರಿಸಿ ನೀಡಿದ ದೂರಿನ ಮೇಲೆ ಇಷ್ಟೆಲ್ಲಾ ಕ್ರಮ ಕೈಗೊಂಡಿರುವುದಾಗಿ ತಿಳಿಸಿರುವ ಪ್ರಾಧಿಕಾರ, ಆರ್.ಟಿ.ಐ ಕಾರ್ಯಕರ್ತ ಪ್ರಶಾಂತ್ ಅಶೋಕ್ ಬುರ್ಗೆಗೆ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ ರೂ 10 ಸಾವಿರ ನಗದು ಬಹುಮಾನ ನೀಡುವುದಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com